ADVERTISEMENT

87 ಕೆರೆಗೆ ಭದ್ರಾ ನದಿ ನೀರು: ಮಾಡಾಳ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 5:24 IST
Last Updated 3 ಸೆಪ್ಟೆಂಬರ್ 2013, 5:24 IST

ಚನ್ನಗಿರಿ: ಉಬ್ರಾಣಿ ಮತ್ತು ಕಸಬಾ ಹೋಬಳಿ ಅಡಿಕೆ ಬೆಳೆಗಾರರ ಸಂಕಷ್ಟವನ್ನು ಉಬ್ರಾಣಿ ಏತ ನೀರಾವರಿ ಯೋಜನೆ ಪರಿಹರಿಸಿದೆ. ತಾಲ್ಲೂಕಿನ 87 ಕೆರೆಗಳಿಗೆ ಭದ್ರಾ ನದಿ ನೀರು ತುಂಬಿಸಲಾಗುತ್ತಿದೆ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ತಾಲ್ಲೂಕಿನ ಗೊಪ್ಪೇನಹಳ್ಳಿಯಲ್ಲಿ ಸೋಮವಾರ ಕೆರೆಗೆ ಬಾಗಿನ ಅರ್ಪಿಸಿದ ಸಂದರ್ಭ ಅವರು ಮಾತನಾಡಿದರು.

ಈ ಯೋಜನೆ ರೈತರ ಸಂಜೀವಿನಿಯಾಗಿದೆ. ಅನುಷ್ಠಾನಕ್ಕಾಗಿ ಹಲವು ಹೋರಾಟಗಾರರು ಶ್ರಮಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂ.  75 ಕೋಟಿಗಿಂತಲೂ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿತ್ತು. ಹಲವಾರು ವರ್ಷಗಳಿಂದ ತುಂಬದಿರುವ ಗೊಪ್ಪೇನಹಳ್ಳಿ ಕೆರೆ ತುಂಬಿ ತುಳುಕುತ್ತಿದೆ.  ರೂ.  7 ಕೋಟಿ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ಭರಿಸುವಂತೆ ಮಾಡಲಾಗಿದೆ. ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಆಗಬೇಕಾಗಿದೆ. ಹೋಬಳಿಯ ಎಲ್ಲಾ ಕೆರೆಗಳು ತುಂಬಿದರೆ, ಅಡಿಕೆ ಬೆಳೆಗಾರರ ಸಂಕಷ್ಟ ದೂರವಾಗಲಿದೆ ಎಂದರು.

ತಾಲ್ಲೂಕು ಕೆಜೆಪಿ ಅಧ್ಯಕ್ಷ ವಡ್ನಾಳ್ ರುದ್ರಸ್ವಾಮಿ, ತಾಲ್ಲೂಕು ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಆರ್.ಲಲಿತಾ, ಮಾಜಿ ಅಧ್ಯಕ್ಷ ಕೆ.ಜಿ.ಮರುಳಸಿದ್ದಪ್ಪ, ಸದಸ್ಯ ಸಿ.ಬಿ. ನಾಗರಾಜ್, ಟಿ.ವಿ.ರಾಜು, ಕೆ.ಪಿ.ಎಂ. ಶಿವಲಿಂಗಯ್ಯ, ಎಂ.ಬಿ.ರಾಜಪ್ಪ, ತಿಪ್ಪೇಸ್ವಾಮಿ, ಕೆಂಚಪ್ಪ, ಜಿ.ಎಂ.ಕುಮಾರಸ್ವಾಮಿ, ಎಪಿಎಂಸಿ ಸದಸ್ಯ ಗಂಗಾಧರ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ, ಕೆರೆಗೆ ಬಾಗಿನ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.