ADVERTISEMENT

ಜಗಳೂರು: ಎರಡನೇ ಮದುವೆ ಗುಟ್ಟು ರಟ್ಟಾಗುವ ಭಯದಲ್ಲಿ ಮಗಳನ್ನೇ ಕೊಂದ ತಂದೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 16:14 IST
Last Updated 12 ಅಕ್ಟೋಬರ್ 2020, 16:14 IST

ಜಗಳೂರು: ಎರಡನೇ ಮದುವೆಯ ಗುಟ್ಟು ಬಯಲಾಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಎರಡೂವರೆ ವರ್ಷದ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಪ್ರಕರಣ ಒಂದು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಗುತ್ತಿದುರ್ಗ ಗ್ರಾಮದ ನಿಂಗಪ್ಪ (35) ಕೊಲೆ ಆರೋಪಿ.ಎರಡನೇ ಹೆಂಡತಿಯ ಎರಡೂವರೆ ವರ್ಷದ ಶಿರೀಷಾಳನ್ನು ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಮಗು ಅಪಹರಣ ಹಾಗೂ ಕೊಲೆ ಆರೋಪದಡಿ ನಿಂಗಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಿಂಗಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಮೂರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ನಿಂಗಪ್ಪ, ಮೊದಲ ಹೆಂಡತಿ ಹಾಗೂ ಸಂಬಂಧಿಕರಿಗೆ ಗೊತ್ತಿಲ್ಲದಂತೆ ಮತ್ತೊಂದು ಮದುವೆಯಾಗಿದ್ದ.

ADVERTISEMENT

ಮೂರು ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಎರಡನೇ ಹೆಂಡತಿಯೊಂದಿಗೆ ಸಂಸಾರ ನಡೆಸುತ್ತಿದ್ದಾಗ ಶಿರೀಷಾ ಹುಟ್ಟಿದ್ದಾಳೆ. ಎರಡನೇ ಮದುವೆ ಬಗ್ಗೆ ಮೊದಲ ಪತ್ನಿಗೆ ಅನುಮಾನ ಬಂದಿದ್ದು, ಪದೇ ಪದೇ ಪ್ರಶ್ನಿಸುತ್ತಿದ್ದಳು. ಇದರಿಂದ ಆತಂಕಗೊಂಡ ನಿಂಗಪ್ಪ, ಸೆಪ್ಟೆಂಬರ್ ಮೊದಲ ವಾರದಲ್ಲಿ ಶಿರೀಷಾಳನ್ನು ಚಿತ್ರದುರ್ಗದಿಂದ ಅಪಹರಿಸಿ ಗುತ್ತಿದುರ್ಗಕ್ಕೆ ಕರೆತಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.

ಒಂದು ತಿಂಗಳಿಂದ ಮಗಳು ಕಾಣೆಯಾದ ಬಗ್ಗೆ ಸಂಶಯಗೊಂಡ ಎರಡನೇ ಪತ್ನಿ, ಈ ಬಗ್ಗೆ ಪತಿಯನ್ನು ಪ್ರಶ್ನಿಸುತ್ತಿದ್ದರು. ಆದರೆ, ನಿಂಗಪ್ಪ ‘ಮಗಳನ್ನು ಬೇರೆಯವರ ಹತ್ತಿರ ಬಿಟ್ಟು ಬಂದಿದ್ದೇನೆ’ ಎಂದು ಸುಳ್ಳು ಹೇಳುತ್ತಿದ್ದ. ಬಾಲಕಿ ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

‘ಎರಡನೇ ಮದುವೆಯ ವಿಚಾರ ಬಯಲಿಗೆ ಬರುತ್ತದೆ ಎಂಬ ಆತಂಕದಿಂದ ಮಗುವನ್ನು ಆರೋಪಿ ಕೊಂದಿದ್ದಾನೆ. ಮಗುವಿನ ಶವವನ್ನು ಗುತ್ತಿದುರ್ಗ ಗ್ರಾಮದ ಸಮೀಪ ಹೂತು ಹಾಕಿರುವುದಾಗಿ ಆರೋಪಿ ಹೇಳುತ್ತಿದ್ದು, ಮಂಗಳವಾರ ಶವ ಹೊರ ತೆಗೆಯಲಾಗುವುದು’ ಎಂದು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್. ಲಕ್ಷ್ಮೀಕಾಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.