ADVERTISEMENT

ಶೈಕ್ಷಣಿಕ ಚಟುವಟಿಕೆ ಸ್ಥಗಿತ, ತಂದೆ ಜತೆ ಮೀನು ಬೇಟೆ: ವಿದ್ಯಾರ್ಥಿಯ ದುಡಿಮೆ

ಓದು ಮುಂದುವರಿಸಿ ಉದ್ಯೋಗ ಪಡೆಯುವ ಕನಸಿನೊಂದಿಗೆ ವಿದ್ಯಾರ್ಥಿಯ ದುಡಿಮೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 2:16 IST
Last Updated 28 ಡಿಸೆಂಬರ್ 2020, 2:16 IST
ಸಂತೇಬೆನ್ನೂರು ಸಮೀಪದ ಜಕ್ಕಲಿ ಗ್ರಾಮದ ಸೂಳೆಕೆರೆ ಹಿನ್ನೀರಿನಲ್ಲಿ ಮೀನು ಹಿಡಿಯಲು ತಂದೆಗೆ ಸಹಕರಿಸುತ್ತಿರುವ ವಿದ್ಯಾರ್ಥಿ ಗಿರೀಶ್
ಸಂತೇಬೆನ್ನೂರು ಸಮೀಪದ ಜಕ್ಕಲಿ ಗ್ರಾಮದ ಸೂಳೆಕೆರೆ ಹಿನ್ನೀರಿನಲ್ಲಿ ಮೀನು ಹಿಡಿಯಲು ತಂದೆಗೆ ಸಹಕರಿಸುತ್ತಿರುವ ವಿದ್ಯಾರ್ಥಿ ಗಿರೀಶ್   

ಸಂತೇಬೆನ್ನೂರು: ಕೋವಿಡ್ ಸಂಕಷ್ಟದಲ್ಲಿ ಶೈಕ್ಷಣಿಕ ಚಟುವಟಿಕೆ ಸ್ಥಗಿತವಾಗಿದ್ದು, ಸ್ಥಿತಿವಂತರ ಮಕ್ಕಳು ಸವಲತ್ತುಗಳೊಂದಿಗೆ ಕಾಲ ಕಳೆಯುತ್ತಿದ್ದರೆ, ಕೆಲ ಮಕ್ಕಳು ಜೀವನೋಪಾಯಕ್ಕಾಗಿ ಪೋಷಕರ ದುಡಿಮೆಗೆ ಸಹಕಾರ ನೀಡುತ್ತಿದ್ದಾರೆ.

ಸೂಳೆಕೆರೆ ಹಿನ್ನೀರಿನ ಅಂಚಿನಲ್ಲಿರುವ ಜಕ್ಕಲಿ ಗ್ರಾಮದ ಗಿರೀಶ್ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶೇ 73 ಅಂಕ ಗಳಿಸಿದ್ದ. ಪ್ರಥಮ ಪಿಯುಗೆ ಸಮೀಪದ ಸಂತೇಬೆನ್ನೂರಿನ ಕೆಪಿಎಸ್ ಶಾಲೆಗೆ ಪ್ರವೇಶ ಪಡೆದಿದ್ದ. ಕಾಲೇಜು ಆರಂಭವಾಗದ ಕಾರಣ ಸೂಳೆಕೆರೆಯಲ್ಲಿ ನಿತ್ಯ ತಂದೆಯೊಂದಿಗೆ ಮೀನು ಹಿಡಿಯಲು ತೆರಳುತ್ತಿದ್ದಾನೆ. ಸದ್ಯ ತಂದೆಯ ದುಡಿಮೆಯ ಪಾಲುದಾರ.

‘ಈಗ ಏನು ಮಾಡುತ್ತೀಯಾ’ ಎಂದವರಿಗೆ ‘ಬ್ಯಾಟೆಗೆ ಹೋಕಿನಿ... ಮೀನು ಬ್ಯಾಟೆ’ ಎನ್ನುತ್ತಾನೆ.

ADVERTISEMENT

ನಿತ್ಯ ಬೆಳಗಿನ ಜಾವ 5ಕ್ಕೆ ತಂದೆಯೊಂದಿಗೆ ದೋಣಿ ಹುಟ್ಟು ಹಾಕುತ್ತ ಸಾಗುವ ಅವರ ಮೀನು ಬೇಟೆ ಬೆಳಿಗ್ಗೆ 9ರ ವರೆಗೆ ನಡೆಯುತ್ತದೆ.

‘ಸದ್ಯ ದಿನಕ್ಕೆ 5ರಿಂದ 10 ಕೆ.ಜಿ. ಮೀನು ಸಿಗುತ್ತಿವೆ. ಗೌರಿ, ರೋವ್, ಜಲೇಬಿ ತಳಿಯ ಮೀನುಗಳು ಸಿಗುತ್ತಿವೆ. ಪ್ರತಿ ಕೆ.ಜಿ. ಗೌರಿ ಮೀನು ₹ 250, ರೋವ್ ₹ 130 ಹಾಗೂ ಜಲೇಬಿ ₹ 100 ರಂತೆ ಮಾರಾಟ ಮಾಡುತ್ತೇವೆ’ ಎನ್ನುತ್ತಾನೆ ಗಿರೀಶ.

‘ಸೂಳೆಕೆರೆಯಲ್ಲಿ 200ರಿಂದ 300 ಮೀನುಗಾರರು ನಿತ್ಯ ಮೀನುಗಾರಿಕೆ ನಡೆಸುತ್ತಾರೆ. ನಮ್ಮ ಗ್ರಾಮದಲ್ಲಿ 8 ಮೀನುಗಾರರಿದ್ದೇವೆ. ಹಿಂದಿನ ದಿನ 2ರಿಂದ 3 ಕಿ.ಮೀ. ನೀರಿನಲ್ಲಿ ಸಾಗಿ ಬಲೆ ಬಿಡುತ್ತೇವೆ. ಮಾರನೆ ದಿನ ಬೆಳಿಗ್ಗೆ ಮೀನು ಸಂಗ್ರಹ ನಡೆಯುತ್ತದೆ. ಮಳೆಗಾಲದಲ್ಲಿ 50 ಕೆ.ಜಿ.ವರೆಗೂ ಮೀನು ಸಿಗುತ್ತವೆ. ಈಗ ವಂಶಾಭಿವೃದ್ಧಿ ಸಮಯ. ಹಾಗಾಗಿ ಮೀನು ಬಲೆಗೆ ಸಿಗುವುದು ಕಡಿಮೆ. ಓದು ಮುಂದುವರಿಸಿ ಪದವಿ ಪಡೆದು ಉದ್ಯೋಗ ಪಡೆಯಲು ಇಚ್ಛಿಸಿದ್ದೇನೆ’ ಎಂದು ತನ್ನ ಅನುಭವ ಹಂಚಿಕೊಂಡ.

‘ಪ್ರತಿ ವರ್ಷ ಮೀನು ಪರವಾನಗಿಗಾಗಿ ₹ 3,500 ಕಟ್ಟಬೇಕು. ಮೀನುಗಾರಿಕೆ ಇಲಾಖೆಯಿಂದ ದೋಣಿ ಹಾಗೂ ಬಲೆ
ಗಳನ್ನು ಕೊಡುತ್ತಿದ್ದರು. ಎರಡು ವರ್ಷ ಗಳಿಂದ ಕೊಡುತ್ತಿಲ್ಲ’ ಎಂದು ಬೇಸರಿಸಿ ದರು ಗಿರೀಶನ ತಂದೆ ಹನುಂತಪ್ಪ ಜಕ್ಕಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.