ADVERTISEMENT

ಅಪಘಾತ: ಹಂಪಿ ವಿ.ವಿ. ಪ್ರಾಧ್ಯಾಪಕ ಸಾವು

ಕಲ್ಲೇದೇವಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:32 IST
Last Updated 28 ನವೆಂಬರ್ 2022, 4:32 IST
ಜಗಳೂರು ತಾಲ್ಲೂಕು ಕಲ್ಲೇದೇವಪುರ ಗ್ರಾಮದ ಸಮೀಪ ಶನಿವಾರ ರಾತ್ರಿ ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವುದು.
ಜಗಳೂರು ತಾಲ್ಲೂಕು ಕಲ್ಲೇದೇವಪುರ ಗ್ರಾಮದ ಸಮೀಪ ಶನಿವಾರ ರಾತ್ರಿ ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿರುವುದು.   

ಜಗಳೂರು: ತಾಲ್ಲೂಕಿನ ಕಲ್ಲೇದೇವಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಕಾರು ಅಪಘಾತದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಾವನ್ನಪ್ಪಿದ್ದು, ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜವಿಜ್ಞಾನಗಳ ನಿಕಾಯದ ಡೀನ್ ಹಾಗೂ ಹಿರಿಯ ಪ್ರಾಧ್ಯಾಪಕ ಡಾ. ಸಿ.ಎಸ್. ವಾಸುದೇವನ್ (57) ಮೃತರು. ಮೈಸೂರಿನ ನಿವಾಸಿಯಾಗಿರುವ ವಾಸುದೇವನ್ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಅವರ ಪುತ್ರ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಶ್ರೇಯಸ್, ಪಿಎಚ್. ಡಿ ವಿದ್ಯಾರ್ಥಿನಿಯರಾದ ಸಂಡೂರಿನ ನಿರ್ಮಲಾ ಹಾಗೂ ಕಿತ್ತೂರಿನ ರಾಜೇಶ್ವರಿ ಕಡ್ಲಿಬುಡ್ಡಿ ಅವರು ತೀವ್ರವಾಗಿ ಗಾಯಗೊಂಡಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹೊರ ನಾಡಿನಲ್ಲಿ ಶನಿವಾರ ಸಮಾರಂಭ ಮುಗಿಸಿಕೊಂಡು ದಾವಣಗೆರೆಗೆ ತೆರಳಿ ಎಂ.ಬಿ.ಬಿ.ಎಸ್ ಓದುತ್ತಿದ್ದ ಮಗ ಶ್ರೇಯಸ್ ಅವರನ್ನು ಕರೆದುಕೊಂಡು ಊಟ ಮಾಡಿ ಚಿತ್ರದುರ್ಗದ ಮಾರ್ಗವಾಗಿ ಹೊಸಪೇಟೆಗೆ ತೆರಳುವಾಗ ಕಲ್ಲೇದೇವಪುರ ಗ್ರಾಮದ ಸೇವಾರಸ್ತೆಯ ಸಮೀಪ ಲಾರಿಗೆ ಕಾರು ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಲಾರಿಯೊಂದಿಗೆ ಚಾಲಕ ಪರಾರಿ ಯಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ADVERTISEMENT

ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.