ADVERTISEMENT

ಸಿರಿಗೆರೆ ಶ್ರೀಗಳ ವಿರುದ್ಧ ಆರೋಪ: ಮಠದ ಭಕ್ತರ ಆಕ್ರೋಶ

ವಾರದಲ್ಲಿ ಆರೋಪಗಳಿಗೆ ತಕ್ಕ ಉತ್ತರ: ಅಣಬೇರು ರಾಜಣ್ಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 8:02 IST
Last Updated 8 ನವೆಂಬರ್ 2021, 8:02 IST
ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದ ತರಳಬಾಳು ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮುಖಂಡ ಅಣಬೇರು ರಾಜಣ್ಣ ಮಾತನಾಡಿದರು. ಸಂಗಮೇಶಗೌಡ್ರು, ವೀರೇಶ್ ಹನಗವಾಡಿ, ಮೇಯರ್ ಎಸ್‌.ಟಿ. ವೀರೇಶ್, ಶಿವಗಂಗಾ ಬಸವರಾಜ್ ಪಾಲ್ಗೊಂಡಿದ್ದರು.
ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದ ತರಳಬಾಳು ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮುಖಂಡ ಅಣಬೇರು ರಾಜಣ್ಣ ಮಾತನಾಡಿದರು. ಸಂಗಮೇಶಗೌಡ್ರು, ವೀರೇಶ್ ಹನಗವಾಡಿ, ಮೇಯರ್ ಎಸ್‌.ಟಿ. ವೀರೇಶ್, ಶಿವಗಂಗಾ ಬಸವರಾಜ್ ಪಾಲ್ಗೊಂಡಿದ್ದರು.   

ದಾವಣಗೆರೆ: ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ವಿರುದ್ಧ ಆರೋಪ ಮಾಡಿದ ಐದು ಮಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭಕ್ತರು, ನವೆಂಬರ್ 13ರಂದು ಆರೋಪಗಳಿಗೆ ಉತ್ತರಿಸಲು ನಿರ್ಧರಿಸಿದ್ದಾರೆ.

ಸಮಾಜದ ಮುಖಂಡ ಅಣಬೇರು ರಾಜಣ್ಣ ನೇತೃತ್ವದಲ್ಲಿ ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದ ತರಳಬಾಳು ಸಭಾಭವನದಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

‘ನವೆಂಬರ್ 13ರಂದು ಬೆಳಿಗ್ಗೆ 11ಕ್ಕೆ ಇದೇ ಕಲ್ಯಾಣ ಮಂಟಪದಲ್ಲಿ ಆರೋಪ ಮಾಡಿದವರನ್ನು ಕರೆಸಿ ಮಠದ ಭಕ್ತರೇ ಉತ್ತರ ನೀಡೋಣ.ಶ್ರೀಗಳನ್ನು ಆಹ್ವಾನಿಸುವುದು ಬೇಡ’ ಎಂದು ಅಣಬೇರು ರಾಜಣ್ಣ ಹೇಳಿದರು.

ADVERTISEMENT

ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ವಕೀಲ ಎಂ. ಸಿದ್ದಯ್ಯ, ಆನಗೋಡು ಗ್ರಾಮದ ಮುಖಂಡ ಎಚ್. ನಂಜುಂಡಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ. ವೀರಭದ್ರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ಬೆಂಗಳೂರಿನ ಮಾದನಬಾವಿ ರುದ್ರಪ್ಪಗೌಡ ಅವರು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳ ವಿರುದ್ಧ ಆರೋಪ
ಮಾಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ವರದಿಗಾರರ ಒಕ್ಕೂಟದ ಎದುರು ಕೆಲವರು ಸಮಿತಿ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಜೆ ನಡೆದ ತುರ್ತುಸಭೆಯಲ್ಲಿ ಈ ಐದು ಮಂದಿಯ ವಿರುದ್ಧ ಮಠದ ಭಕ್ತರು ಹರಿಹಾಯ್ದರು. ಅವರ ವಿರುದ್ಧ ಏಕಚನದಲ್ಲೇ ನಿಂದಿಸಿದರು.

‘ಮಠದಲ್ಲಿ ಇದ್ದವರೇ ದ್ರೋಹ ಬಗೆದಿದ್ದಾರೆ. ಸಿದ್ದಯ್ಯ 8 ಜನ ಸಂಬಂಧಿಕರಿಗೆ ಹೇಗೆ ನೌಕರಿ ಕೊಡಿಸಿದರು. ವೀರಭದ್ರಪ್ಪ ಹೇಗೆ ಎಂಎಲ್‌ಸಿ ಆದರು. ಶಿವನಕೆರೆ ಬಸವಲಿಂಗಪ್ಪ ಹೇಗೆ ಹಣ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಭಕ್ತರು ಆರೋಪಿಸಿದರು.

‘ಶ್ರೀಗಳ ಹಾಗೂ ಮಠದ ವಿರುದ್ಧ ಆರೋಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡೋಣ’ ಎಂದು ಕೆಲವು ಭಕ್ತರು ಗುಡುಗಿದರೆ, ಮತ್ತೆ ಕೆಲವರು ‘ಹಾಗೆ ಮಾಡಿದರೆ ಮಠಕ್ಕೆ ಹಾಗೂ ಶ್ರೀಗಳಿಗೆ ಕೆಟ್ಟ ಹೆಸರು ಬರುತ್ತದೆ. ಶಿಸ್ತು ಕಾಪಾಡಿಕೊಂಡು, ಆಯ್ದ 10 ಮಂದಿ ಅವರ ಆರೋಪಗಳಿಗೆ ಉತ್ತರಿಸೋಣ’ ಎಂದು ಸಲಹೆ ನೀಡಿದರು.

ಸಮಾಜದ ಮುಖಂಡ ಚಂದ್ರಣ್ಣ ‘ಸಿರಿಗೆರೆ ಮಠ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಇತರೆ ಮಠಗಳ ಸ್ವಾಮೀಜಿ ಹಾಗೂ ಭಕ್ತರು ಸಿರಿಗೆರೆ ಮಠವನ್ನು ಮಾದರಿಯಾಗಿ ಇರಿಸಿಕೊಂಡಿದ್ದಾರೆ. ಸಂಯಮ ಕಾಪಾಡೋಣ‘ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ‘ಸಿರಿಗೆರೆ ಮಠದಲ್ಲಿ ಪಾರದರ್ಶಕತೆ ಇರುವುದರಿಂದಲೇ ಕೋಟ್ಯಂತರ ಹಣ ಬರುತ್ತಿದೆ. ಒಂದು ತಂಡದಿಂದ ಮಠದ ವಿರುದ್ಧ ಷಡ್ಯಂತ್ರ ನಡೆದಿದೆ. ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳೋಣ’ ಎಂದು ಹೇಳಿದರು.

ಮಹಾನಗರ ಪಾಲಿಕೆ ಮೇಯರ್ ಎಸ್‌.ಟಿ. ವೀರೇಶ್, ‘ಇದೊಂದು ವ್ಯವಸ್ಥಿತ ಷಡ್ಯಂತ್ರ. ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಡೋಣ. ನಮ್ಮ ತಾಳ್ಮೆ ದೌರ್ಬಲ್ಯವಲ್ಲ. ಆರೋಪ ಮಾಡಿದವರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜದ ಒಗ್ಗಟ್ಟು ಹೆಚ್ಚಾಗುತ್ತದೆ’ ಎಂದರು.

ಸಭೆಯ ಕೊನೆಯಲ್ಲಿ ಅಣಬೇರು ರಾಜಣ್ಣ ಮಾತನಾಡಿ, ‘ಮಠದ ಸಾಮಾನ್ಯ ಸಭೆಯಲ್ಲಿ ಶ್ರೀಗಳು ಲೆಕ್ಕ ಒಪ್ಪಿಸಿದ್ದಾರೆ. ಸಮಾಜದಲ್ಲಿ ಇರುವವರೇ ಲೆಕ್ಕ ಕೇಳಿರುವುದರಿಂದ ನಾವೇ ಲೆಕ್ಕ ಕೊಡೋಣ. ಶ್ರೀಗಳು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯ
ವಿಲ್ಲ. ಅವರ ವಿರುದ್ಧವೇ ಆರೋಪ ಮಾಡಿರುವುದು ದೊಡ್ದ ದುರಂತ. ಅದಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಎಚ್ಚರಿಸಿದರು. ಸಂಗಮೇಶಗೌಡ್ರು, ವೀರೇಶ್ ಹನಗವಾಡಿ, ಮೇಯರ್ ಎಸ್‌.ಟಿ. ವೀರೇಶ್, ಶಿವಗಂಗಾ ಬಸವರಾಜ್, ಎಚ್‌.ಡಿ.ಮಹೇಶ್, ಮಲ್ಲಿಕಾರ್ಜುನ ಕಬ್ಬೂರು, ಹಾಲುವರ್ತಿ ಮಹೇಶ್ವರ‌ಪ್ಪ, ಚಂದ್ರಪ್ಪ, ಹನುಮನಹಳ್ಳಿ ನಾಗೇಂದ್ರ, ತಿಪ್ಪಣ್ಣ, ಗಂಗಣ್ಣ, ತೀರ್ಥಪ್ಪ, ಶಶಿಧರ ಹೆಮ್ಮನಬೇತೂರು
ಇದ್ದರು.

---

‘ಎಸ್‌.ಎಸ್‌.ಪಾಟೀಲರನ್ನು ಮಠದೊಳಕ್ಕೆ ಬಿಟ್ಟುಕೊಳ್ಳಬಾರದಿತ್ತು’

‘ಹಿರೇಕೆರೂರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ ಅವರನ್ನು ಸಾಣೇಹಳ್ಳಿ ಶ್ರೀಗಳು ಮಠದಲ್ಲಿ ಸನ್ಮಾನಿಸಿದ್ದಾರೆ. ಆದರೆ ಅವರನ್ನು ಮಠದೊಳಗೆ ಬಿಟ್ಟುಕೊಡಬಾರದಿತ್ತು’ ಎಂದು ಮುಖಂಡ ಅಣಬೇರು ರಾಜಣ್ಣ ಆಕ್ಷೇಪ ವ್ಯಕ್ತಪ‍ಡಿಸಿದರು.

‘ಸಾಣೇಹಳ್ಳಿಗೆ ಬಂದು ಆತ ಅವಮಾನ ಮಾಡಿದ್ದಾನೆ. ಆತನನ್ನು ಊರಿನ ಹೊರಗಡೆ ನಿಲ್ಲಿಸಬೇಕಿತ್ತು. ದೊಡ್ಡ ಸ್ವಾಮೀಜಿಗಳ (ಸಿರಿಗೆರೆ ಶ್ರೀಗಳು) ಅನುಮತಿ ಕೇಳಬೇಕಿತ್ತು’ ಎಂದು ಹೇಳಿದರು.

ಪೀಠ ತ್ಯಾಗ ಮಾಡಲು ಒತ್ತಾಯ

‘ಸಿರಿಗೆರೆ ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠ ತ್ಯಜಿಸಬೇಕು. ಉತ್ತರಾಧಿ‌ಕಾರಿ ಆಯ್ಕೆ ಹೊಣೆಯನ್ನು ಸಮಾಜಕ್ಕೆ ನೀಡಬೇಕು’ ಎಂದು ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಆಗ್ರಹಿಸಿತು.

ಜಾಗೃತಿ ಸಮಿತಿಯ ಮುದೇಗೌಡ್ರು ವೀರಭದ್ರಪ್ಪ, ಆನಗೋಡು ನಂಜುಂಡಪ್ಪ, ಎಂ. ಸಿದ್ದಯ್ಯ ಇತರರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಉತ್ತರಾಧಿಕಾರಿ ನೇಮಕ ಸಂಬಂಧ ಶ್ರೀಗಳಿಗೆ ನಾಲ್ಕು ಬಾರಿ ಪತ್ರ ಬರೆದರೂ ಉತ್ತರ ಬರಲಿಲ್ಲ. ಹಿಂದಿನ ಜಗದ್ಗುರು ಶಿವಕುಮಾರ ಶಿವಚಾರ್ಯರು ಪ್ರಜಾಪ್ರಭುತ್ವದ ರೀತಿಯಲ್ಲಿ 50ನೇ ವಯಸ್ಸಿನಲ್ಲಿಯೇ ಶಿವಮೂರ್ತಿ ಶಿವಾಚಾರ್ಯರಿಗೆ ಉತ್ತರಾಧಿಕಾರಿಯಾಗಿ ಪರಿಚಯಿಸಿ, 60ನೇ ವಯಸ್ಸಿನಲ್ಲಿ ಪಟ್ಟ ಕಟ್ಟಿದರು. 2012ರಲ್ಲಿ ಪೀಠ ತ್ಯಜಿಸುವುದಾಗಿ ಹೇಳಿದ್ದ ಇಂದಿನ ಶ್ರೀಗಳು ಉತ್ತರಾಧಿಕಾರಿ ನೇಮಿಸಿಲ್ಲ’ ಎಂದು ಆರೋಪಿಸಿದರು.

‘ಈಗಿನ ಸ್ವಾಮೀಜಿಯವರು ಮುಗ್ಧ ಜನರನ್ನು ಇಟ್ಟುಕೊಂಡು ಸಮಾಜದ ವಿದ್ವತ್ತು ಉಳ್ಳವರ ಪಡೆ ಮೇಲೆಯೇ ಶಿಕ್ಷಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಸ್ವಾಮೀಜಿ ಸುಲಭವಾಗಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಕಾಣಲು ಭಕ್ತರು ದಿನವಿಡೀ ಕಾಯುವ ಸ್ಥಿತಿ ಇದೆ. ಸಾಣೇಹಳ್ಳಿ ಶ್ರೀಗಳನ್ನೂ ಕಾಯಿಸಿದ್ದ ಉದಾಹರಣೆಗಳು ಇವೆ’ ಎಂದು ಆರೋಪಿಸಿದರು.

‘ಮಠದ ಕಾರ್ಯಕ್ಷೇತ್ರ, ಪಟ್ಟಾಧ್ಯಕ್ಷರ ಆಯ್ಕೆ, ಆಸ್ತಿ ನಿರ್ವಹಣೆ ಕುರಿತಂತೆ ನಿಯಮಗಳನ್ನು ಕ್ರೋಡೀಕರಿಸಿದ್ದ ಹಿಂದಿನ ಜಗದ್ಗುರುಗಳು ಭಕ್ತರ ಒಪ್ಪಿಗೆ ಮೇರೆಗೆ ಸಾದು ಸದ್ಧರ್ಮ ವೀರಶೈವ ಸಂಘದ ಬೈಲಾಗಳನ್ನು 1977ರಲ್ಲಿ ನೋಂದಣಿ ಮಾಡಿಸಿದ್ದರು. ಅದರನ್ವಯ ಮಠದ ಕಾರ್ಯ ನಿರ್ವಹಿಸಲಾಗುತ್ತಿತ್ತು. ಆದರೆ ಈಗಿನ ಶ್ರೀಗಳು ತಮ್ಮ ಹೆಸರಿನಲ್ಲೇ ಟ್ರಸ್ಟ್ ಅನ್ನು ಬರೆದುಕೊಂಡು 1990ರ ಜುಲೈನಲ್ಲಿ ನೋಂದಣಿ ಮಾಡಿಸಿಕೊಂಡರು. ಇದನ್ನು ಬರೆದುಕೊಳ್ಳುವ ಪೂರ್ವದಲ್ಲಿ ಸರ್ವಸದಸ್ಯರ ಸಭೆಯಲ್ಲಿ ನಿರ್ಣಯಿಸಲಿಲ್ಲ. ಇದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.