ದಾವಣಗೆರೆ: ಕಲಾವಿದರು ವೈಮನಸು, ಪರಸ್ಪರ ನಿಂದನೆ ಮಾಡುವುದನ್ನು ಬಿಟ್ಟು ಒಗ್ಗೂಡಿ ಮುನ್ನಡೆದರೆ ಅನುಕೂಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸಲಹೆ ನೀಡಿದರು.
ಇಲ್ಲಿನ ಮಹಾನಗರ ಪಾಲಿಕೆಯ ರಂಗಮಂಟಪದಲ್ಲಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವೃತ್ತಿ ರಂಗಭೂಮಿ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಒಂದು ಭಾಗ. ಕಲಾವಿದರ ಕಾರ್ಯಕ್ರಮಗಳಿಗೆ ಪ್ರಾಯೋಜನ ನೀಡುವ ಸಾಮರ್ಥ್ಯ ರಂಗಾಯಣಕ್ಕೆ ಇಲ್ಲ. ಇಂತಹ ಶಕ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಇಲಾಖೆ ಮಾಡಲಿದೆ’ ಎಂದು ಹೇಳಿದರು.
‘ಕಲಾವಿದರಿಗೆ ಹಲವು ರೀತಿಯ ಪ್ರೋತ್ಸಾಹವನ್ನು ಇಲಾಖೆ ನೀಡುತ್ತಿದೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ವೈದ್ಯಕೀಯ ವೆಚ್ಚ ಭರಿಸುತ್ತಿದೆ. ಮಾಸಾಶನದ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಮಧ್ಯವರ್ತಿ ಮೊರೆ ಹೊಗದೇ ನೇರವಾಗಿ ಇಲಾಖೆ ಸಂಪರ್ಕಿಸಿ’ ಎಂದು ಕಿವಿಮಾತು ಹೇಳಿದರು.
‘ರೈತರು ಹಾಗೂ ರಂಗಭೂಮಿ ಕಲಾವಿದರಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ರಂಗಭೂಮಿ ಕಲಾವಿದರು ಒಂದಾಗಿ ನಡೆದರೆ ಒಳಿತು. ಭಿನ್ನಾಭಿಪ್ರಾಯ ಬದಿಗೊತ್ತಿ ಏಕ ಆಶಯಕ್ಕೆ ಒತ್ತು ನೀಡಿ ಮುನ್ನಡೆಯೋಣ. ಉತ್ತಮ ನಾಟಕ ರಚನೆಗೆ ಗಮನ ಹರಿಸೋಣ’ ಎಂದು ಸಾಹಿತಿ ಬಾ.ಮ. ಬಸವರಾಜಯ್ಯ ಅಭಿಪ್ರಾಯಪಟ್ಟರು.
ವಕೀಲ ಕುಡುಪಲಿ ನಾಗರಾಜ, ಸಂಘದ ಅಧ್ಯಕ್ಷ ಎ. ಭದ್ರಪ್ಪ, ಐರಣಿ ಬಸವರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.