ದಾವಣಗೆರೆ: ಮಹಾನಗರ ಪಾಲಿಕೆ, ಕನ್ನಡಪರ ಸಂಘಟನೆಗಳು, ಪತ್ರಕರ್ತರ ಸಂಘಗಳು ಸಂಯುಕ್ತವಾಗಿ ಆಚರಿಸುವ ರಾಜ್ಯೋತ್ಸವವನ್ನು ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಬೇಕು ಎಂದು ಪಾಲಿಕೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಲಹೆಗಳು ಬಂದಿವೆ.
ಮೇಯರ್ ಜಯಮ್ಮ ಗೋಪಿನಾಯ್ಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕಳೆದ ಬಾರಿ ಅರ್ಹರ ಜತೆಗೆ ಅರ್ಹತೆ ಇಲ್ಲದವರನ್ನು, ಮೀಟರ್ ಬಡ್ಡಿ ವ್ಯವಹಾರದವರನ್ನು ಎಲ್ಲ ಕರೆದು ಸನ್ಮಾನ ಮಾಡಲಾಗಿತ್ತು. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು. ನೈಜ ಸಾಧಕರನ್ನು ಆಯ್ಕೆ ಮಾಡಬೇಕು. ಕಳೆದ ವರ್ಷ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಮಾಡಲಾಗಿತ್ತು. ಅದರ ವಿಜೇತರಿಗೆ ಬಹುಮಾನ ವಿತರಣೆ ಸರಿಯಾಗಿ ಮಾಡಿಲ್ಲ. ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಮಾಡಲಾಗುತ್ತಿದೆ. ಈ ಬಾರಿ ಕವಿಗೋಷ್ಠಿ ಮಾಡಿದರೆ ಉತ್ತಮ ಮುಂತಾದ ಸಲಹೆಗಳು ಬಂದವು.
ಜನರಿಗೆ ಕಸ ವಿಲೇವಾರಿ ಬಗ್ಗೆ ಇನ್ನೂ ಜಾಗೃತಿಯಾಗಿಲ್ಲ. ಅದಕ್ಕಾಗಿ ಹಸಿಕಸ, ಒಣಕಸದ ಬಗ್ಗೆ, ಪರಿಸರ ಉಳಿಸುವ ಬಗ್ಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಬೇಕು. ಸಂಘಟನಾ ಸಮಿತಿಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಕೆಲವರು ಸೂಚನೆ ನೀಡಿದರು.
ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಸದಸ್ಯರಾದ ಎಲ್.ಡಿ. ಗೋಣೆಪ್ಪ, ರಾಕೇಶ್ ವೈ. ಜಾಧವ್, ಸೋಗಿ ಶಾಂತಕುಮಾರ್, ಎಸ್.ಟಿ. ವೀರೇಶ್, ಗಡಿಗುಡಾಳ್ ಮಂಜುನಾಥ್, ಎ.ನಾಗರಾಜ್, ವಿವಿಧ ಸಂಘಟನೆಗಳ ನಾಗೇಂದ್ರ ಬಂಡಿಕೇರ್, ಕೆ.ಜಿ. ಶಿವಕುಮಾರ್, ಟಿ. ಶಿವಕುಮಾರ್, ಟಿ.ಎಂ. ಶಿವಯೋಗಿಸ್ವಾಮಿ, ಸೋಮಶೇಖರ್, ಸೋಮ್ಲಾಪುರದ ಹನುಮಂತಪ್ಪ, ಜಮ್ನಳ್ಳಿ ನಾಗರಾಜ್, ಸುವರ್ಣಮ್ಮ, ಬಸಮ್ಮ, ರಾಜಶೇಖರ ಗುಂಡುಗಟ್ಟಿ, ರಾಜೇಂದ್ರ ಬಂಗೇರ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.