ADVERTISEMENT

ಗಣಪತಿ ವಿಸರ್ಜನೆ ವೇಳೆ ಮಚ್ಚು ಪ್ರದರ್ಶನ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 17:06 IST
Last Updated 5 ಸೆಪ್ಟೆಂಬರ್ 2022, 17:06 IST

ಹರಿಹರ: ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ಮಚ್ಚು ಪ್ರದರ್ಶಿಸಿ ಭಯದ ವಾತಾವರಣ ಸೃಷ್ಟಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ಜೈಭೀಮ್ ನಗರದ ನಯಾಜ್ ಅಹಮದ್ (21), ಮಹಮದ್ ನವಾಜ್‌ (19) ಬಂಧಿತರು. ನಾಪತ್ತೆಯಾಗಿರುವ ಇನ್ನೊಬ್ಬ ಆರೋಪಿ ಶೇರ್ ಅಲಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.

ಇಲ್ಲಿನ ಜೈಭೀಮ್ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯ ವಿಸರ್ಜನೆಗಾಗಿ ಭಾನುವಾರ ರಾತ್ರಿ 9.35ರ ವೇಳೆ ಮೆರವಣಿಗೆ ಸಾಗುತ್ತಿತ್ತು. ಸರ್ಕಲ್ ಬಳಿ ಬಂದಾಗ ಮೂವರು ಒಂದೂವರೆ ಅಡಿ ಉದ್ದದ ಮಚ್ಚು ಎತ್ತಿ ತೋರಿಸಿ ಭಯವನ್ನುಂಟು ಮಾಡಿದ್ದಾರೆ.

ADVERTISEMENT

‘ಈ ಮೂವರು ಆರೋಪಿಗಳು ಮಚ್ಚನ್ನು ಎತ್ತಿ ತೋರಿಸಿ ಮೂರ್ತಿ ಪೂಜೆ ಮಾಡುವವರು ಹಾಗೂ ಮಾಡದೇ ಇರುವವರ ಮಧ್ಯೆ ದ್ವೇಷ ಉಂಟು ಮಾಡುವ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗವನ್ನು ತಂದಿದ್ದಾರೆ’ ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಗದೀಶ ಎಂಬುವರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.