ದಾವಣಗೆರೆ: ಕಲ್ಲುಗಣಿಗಾರಿಕೆ ಸ್ಫೋಟಿಸಲು ಗೋದಾಮಿನಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದು, ಆರ್.ಎಂ.ಸಿ ಲಿಂಕ್ ರಸ್ತೆಯಲ್ಲಿರುವ ಮತ್ತೊಂದು ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಇನ್ನಷ್ಟು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ನಿವಾಸಿಗಳಾದ ಷಣ್ಮುಗಪ್ಪ, ವಿಕ್ರಂ ಹಾಗೂ ದೀಪಕ್ ಬಂಧಿತರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಕಡೆ ಸ್ಫೋಟಕಗಳನ್ನು ಶೇಖರಿಸಿ ಇಟ್ಟಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬಂಧಿತರಿಂದ 45 ರಿಮ್ (315 ಮೀ) ಸೇಫ್ಟಿ ಫ್ಯೂಸ್, 500 ಜಿಲೆಟಿನ್ ಕಡ್ಡಿಗಳು, 55 ಪಾಕೆಟ್ (200 ಪೀಸ್) ಎಲೆಕ್ಟ್ರಾನಿಕ್ ಡಿಟೋನೇಟರ್ಸ್, 20 ಕೆಜಿ ಗನ್ ಪೌಡರ್, 50 ಕೆಜಿಯ 25 ಪ್ಯಾಕೆಟ್ ಹಾಗೂ 25 ಕೆಜಿಯ 390 ಪ್ಯಾಕೆಟ್ ಅಮೊನಿಯಂ ಸಲ್ಫೇಟ್, 3 ಪ್ಯಾಕೆಟ್ (300 ಪೀಸ್) ನಾನ್ ಎಲೆಕ್ಟ್ರಾನಿಕ್ ಡಿಟೋನೇಟರ್ಸ್, 4 ಪ್ಯಾಕೆಟ್ ನಂಬರ್ ಇಡಿ ಗ್ರೀನ್, 2 ರಿಮ್ ನಂಬರ್ ಇಡಿ ರೆಡ್, 15 ಪ್ಯಾಕೆಟ್ ನಂಬರ್ ಇಡಿ ವೈಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ ಅವರ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಪಿಎಸ್ಐ ಕುಮಾರ್.ಕೆ ಮತ್ತು ಅರಸೀಕೆರೆ ಪಿಎಸ್ಐ ಕಿರಣ್ ಕುಮಾರ ಮತ್ತು ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.