ದಾವಣಗೆರೆ: ಕಲಾಕೃತಿಗಳನ್ನು ರಚನೆ ಮಾಡುವುದು ಕಷ್ಟದ ಕೆಲಸ. ಅದನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು ಇನ್ನೂ ಕಷ್ಟ ಎಂದು ದೃಶ್ಯ ಕಲಾ ಮಹಾವಿದ್ಯಾಲಯದ ಬೋಧಕ ಸಹಾಯಕ ದತ್ತಾತ್ರೇಯ ನಾರಾಯಣ ಭಟ್ಟ ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್ನ ಸಂಕಲನ ಕಲಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಂತೋಷ ಕುಮಾರ್ ಅವರ ಏಕವ್ಯಕ್ತಿ ‘ದೃಶ್ಯ ಮುದ್ರೆ’ ಮುದ್ರಣ ಕಲೆ (ಗ್ರಾಫಿಕ್ ಆರ್ಟ್) ಮತ್ತು ಚಿತ್ರ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ, ಯುವ ಕಲಾವಿದರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಮೂಲಕ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಕಲನ ಕಲಾ ಕೇಂದ್ರ ಮಾಡುತ್ತಿದೆ. ಇದರಿಂದ ಸಂತೋಷ ಕುಮಾರ್ ಅವರ ಪ್ರತಿಭೆ ಅನಾವರಣಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾಕೃತಿಗಳು ಗ್ರಾಫಿಕ್ನಲ್ಲಿ ಮೂಡಬೇಕಾದರೆ ಯಂತ್ರಗಳ ಸಹಾಯದಿಂದಲೇ ಮಾಡಬೇಕಾಗುತ್ತದೆ. ಗ್ರಾಫಿಕ್ ಕಲಾ ಪ್ರದರ್ಶನಗಳು ನಡೆಯುವುದೇ ಬಹಳ ಅಪರೂಪ. ಗ್ರಾಫಿಕ್ ಮುದ್ರಣ ಯಂತ್ರ ಸಿಗುವುದು ಕಷ್ಟ ಮತ್ತು ದುಬಾರಿ. ಒಬ್ಬ ಕಲಾವಿದ ಆ ಯಂತ್ರ ಖರೀದಿಸುವುದು ಕಷ್ಟ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗಪ್ಪಿ,‘ಕಲೆ ಬೆಳೆಯಲು, ಪರಿವಾರ, ಪರಿಸರ ಬಹಳ ಅವಶ್ಯಕ.ಅದು ದಾವಣಗೆರೆಯಲ್ಲಿ ನನ್ನ ಓದಿನ ದಿನಗಳಿಂದಲೂ ಕಂಡಿದ್ದು ಇಂದು ಕೂಡಾ ಇದೆ. ಕಲಾವಿದ ಸಂತೋಷ ಕುಮಾರ್ ಅವರ ಮೊದಲ ಏಕವ್ಯಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದು ಸಂಕಲನದ ಹೆಮ್ಮೆ’ ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ಎಂ.ಜಿ.ಉಷಾ ಸ್ವಾಗತಿಸಿದರು. ಚಿರಂಜೀವಿ, ದಕ್ಷ ಪ್ರಾರ್ಥಿಸಿದರು. ಮಾರ್ಚ್ 1ರ ವರೆಗೆ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.