ADVERTISEMENT

ಇದು ಚೀರಾಟಗಳ ಶತಮಾನ: ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 20:30 IST
Last Updated 8 ಸೆಪ್ಟೆಂಬರ್ 2019, 20:30 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಹರಪನಹಳ್ಳಿ: ಧರ್ಮ, ಸಂಸ್ಕೃತಿ, ಪ್ರಜಾಪ್ರಭುತ್ವದ ಅಪವ್ಯಾಖ್ಯಾನಗಳು ವಿಜೃಂಭಿಸುತ್ತಿರುವ 21ನೇ ಶತಮಾನ ಚೀರಾಟಗಳ ಶತಮಾನವಾಗಿದೆ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ದೇವರಾಜು ಅರಸು ಭವನದಲ್ಲಿ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ ತಾಲ್ಲೂಕು ಸಮಿತಿ ಭಾನುವಾರ ಆಯೋಜಿಸಿದ್ದ ‘ಸಮಕಾಲೀನ ಸಂದರ್ಭದಲ್ಲಿ ಸಂವಿಧಾನ ಮತ್ತು ಚಳವಳಿಗಳು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಏಕ ಧರ್ಮ, ಏಕ ಸಂಸ್ಕೃತಿ, ಏಕ ರಾಷ್ಟ್ರೀಯತೆ, ಏಕ ನಾಯಕತ್ವಕ್ಕೆ ಆದ್ಯತೆ ನೀಡಲಾಗುತ್ತಿದ್ದು, ರಾಷ್ಟ್ರೀಯತೆ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಮಾನವೀಯತೆಯು ಮತೀಯತೆಯಾಗಿದೆ, ಸಾಮಾಜಿಕ-ಆರ್ಥಿಕ ಅವಿವೇಕವಾಗಿದೆ, ಸಂಘಟನೆ-ವಿಘಟನೆ, ಸತ್ಯ-ಅಸತ್ಯ, ವಿಜ್ಞಾನ-ಅಜ್ಞಾನವಾಗಿ ಆವರಿಸಿಕೊಂಡು ಎರಡರ ನಡುವಿನ ವ್ಯತ್ಯಾಸವೇ ಅರ್ಥವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗಾಂಧೀಜಿ, ಅಂಬೇಡ್ಕರ, ಭಗತ್ ಅವರಲ್ಲಿದ್ದ ರಾಷ್ಟ್ರೀಯತೆ ಪರಿಕಲ್ಪನೆ ಮರೆಯುತ್ತಿದ್ದೇವೆ.ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವದಲ್ಲಿ ಬದುಕುವ ಆತಂಕ ದೂರ ಮಾಡಲು, ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡುವ ಬಲವಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.