ADVERTISEMENT

ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದ ಬಸವಣ್ಣ

ಮಹಿಳೆಯರಿಗೆ, ದಲಿತರಿಗೆ ಮನ್ನಣೆ: ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:38 IST
Last Updated 12 ಮೇ 2019, 6:38 IST
ದಾವಣಗೆರೆಯ ರೋಟರಿ ಬಾಲಭವನದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಂಬತ್ತಳ್ಳಿ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ವಕೀಲ ಎಸ್‌.ಎಚ್‌. ವಿನಯಕುಮಾರ್ ಸಾಹುಕಾರ್‌ ಉದ್ಘಾಟಿಸಿದರು
ದಾವಣಗೆರೆಯ ರೋಟರಿ ಬಾಲಭವನದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಂಬತ್ತಳ್ಳಿ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ವಕೀಲ ಎಸ್‌.ಎಚ್‌. ವಿನಯಕುಮಾರ್ ಸಾಹುಕಾರ್‌ ಉದ್ಘಾಟಿಸಿದರು   

ದಾವಣಗೆರೆ: ದಲಿತರು, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದವರು ಬಸವಣ್ಣ. ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಮನ್ನಣೆ ನೀಡಿದವರು ಅವರು ಎಂದು ಕಂಬತ್ತಳ್ಳಿ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ರೋಟರಿ ಬಾಲಭವನದಲ್ಲಿ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ತು, ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ತು, ಭರಮಸಾಗರದ ಸಮಗ್ರ ಸಾಹಿತ್ಯ ವೇದಿಕೆ, ಚಿತ್ರದುರ್ಗದ ಸಿರಿಗನ್ನಡ ವೇದಿಕೆ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಯುಗಮಾನೋತ್ಸವ, ಬಸವ ಜಯಂತಿ, ಕಾರ್ಮಿಕ, ಮಹಿಳಾ ಹಾಗೂ ಗ್ರಾಹಕರ ದಿನಾಚರಣೆ, ‘ಕಾಯಕಯೋಗಿ ಬಸವಶ್ರೀ’, ‘ಅಕ್ಕಮಹಾದೇವಿ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಬಸವಣ್ಣನವರಿಗೂ ಮೊದಲು ಧರ್ಮ ಕೆಲವರ ಸ್ವತ್ತಾಗಿತ್ತು. ಕೆಳವರ್ಗದವರಿಂದ ಹಿಡಿದು ಮಹಿಳೆಯರವರೆಗೆ ಎಲ್ಲರಿಗೂ ಧರ್ಮದ ಬಗ್ಗೆ
ತಿಳಿಸಿದವರು ಬಸವಣ್ಣ. ಈ ಮೂಲಕ ಬಹುದೊಡ್ಡ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ ಹಿರಿಮೆ ಅವರಿಗೆ ಸಲ್ಲಬೇಕು. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂಬುದು ಇಂದು ಬಹುಚರ್ಚಿತ ವಿಷಯ. ಇದನ್ನು 12ನೇ ಶತಮಾನದಲ್ಲೇ ಪ್ರತಿಪಾದಿಸಿದವರು ಬಸವಣ್ಣ. ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಪೂರ್ಣ ಪ್ರಮಾಣದ ರಾಜಕೀಯ ಮೀಸಲಾತಿ ಇನ್ನೂ ಸಿಗದಿರುವುದು ವಿಷಾದನೀಯ. ಮಹಿಳೆಯರ ಸಾಧನೆಯನ್ನು ಗುರುತಿಸಬೇಕು. ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ಇದನ್ನು ನೀಡಬೇಕಾದುದು ಎಲ್ಲರ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ADVERTISEMENT

ಇಂದಿನ ಯುವಕರು ಮಾರ್ಗದರ್ಶನದ ಕೊರತೆಯಿಂದ ಹಾದಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಹೊಣೆ ಹಿರಿಯರ ಮೇಲಿದೆ ಎಂದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತಿದ್ದು ಸಾಧನೆ ಮಾಡಿದವರನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆಗಳ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾವರಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಡಾಕ್ಟರೇಟ್‌ ಪಡೆದ ಗುರುಬಸವ ಸ್ವಾಮೀಜಿ, ಸಾಹಿತಿ ರೇವಣ್ಣ ಬಳ್ಳಾರಿ, ಎಸ್‌.ಎಚ್‌. ವಿನಯಕುಮಾರ್‌ ಸಾಹುಕಾರ್‌ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಬೇರ‍್ಯ ರಾಮಕುಮಾರ್, ಕವಿ ರೋಷನ್‌, ಜ್ಯೊತಿಷಿ ಶಿವಕುಮಾರ್‌, ಎಚ್‌.ವಿ. ಪ್ರಭುಲಿಂಗಪ್ಪ, ಪಲ್ಲಾಗಟ್ಟೆ ಶಿವಯೋಗಪ್ಪ, ಸಂಗಪ್ಪ ತೋಟದ್, ಪತ್ರಿಕಾ ವಿತರಕ ಗಿರೀಶ್‌ ಅವರಿಗೆ ‘ಕಾಯಕಯೋಗಿ ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ತ್ರೀರೋಗ ತಜ್ಞೆ ಡಾ. ಸುಶೀಲಮ್ಮ ಎಂ.ಡಿ., ಶಿಕ್ಷಕಿ ಸಿ.ಕೆ. ಗೀತಾ, ಸಾಹಿತಿ ಎ.ಬಿ.ರುದ್ರಮ್ಮ, ದಯಾಪುತ್ತೂರಕರ್‌ ಅವರಿಗೆ ‘ಅಕ್ಕಮಹಾದೇವಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧೆಡೆಯಿಂದ ಬಂದ ಕವಿಗಳು ಕವನ ವಾಚಿಸಿದರು. ಎನ್.ಜೆ. ಶಿವಕುಮಾರ್‌, ಸುಧಾರಾಜು, ಬಸವರಾಜ್‌ ಟಿ. ಬೆಳಗಟ್ಟ, ಮಹಾಂತೇಶ್‌ ನಿಟ್ಟೂರು, ಸುಭಾಷಿಣಿ ಮಂಜುನಾಥ್ ಅವರೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.