ಬಸವಾಪಟ್ಟಣ: ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಉತ್ತೇಜಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದ್ದ ಗ್ರಾಮೀಣ ಕ್ರೀಡೆಗಳನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಚಯಿಸಿ ಎಂದು ರಾಜ್ಯ ರೈತ ಮುಖಂಡ ತೇಜಸ್ವಿಪಟೇಲ್ ಹೇಳಿದರು.
ಸಮೀಪದ ಕೋಟೆಹಾಳ್ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಎಲ್ಲ ಕಡೆಗಳಲ್ಲಿಯೂ ವಿದೇಶೀ ಕ್ರೀಡೆಗಳು ಮಕ್ಕಳ ಮನಸ್ಸನ್ನು ತುಂಬಿವೆ. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರ ಎಂಬಂತಾಗಿದೆ. ನೂರಾರು ವರ್ಷಗಳಿಂದ ದೇಶದಲ್ಲಿ ರೂಢಿಯಲ್ಲಿದ್ದ ಕ್ರೀಡೆಗಳು ಮರೆಯಾಗಿವೆ. ಎಲ್ಲ ಮಕ್ಕಳೂ ಗುಂಪಾಗಿ ಆಡುವ ಆಟಗಳಿಗೆ ಮಹತ್ವ ನೀಡಬೇಕು. ಇಲ್ಲವಾದಲ್ಲಿ ಕೆಲವೇ ಮಕ್ಕಳು ಕ್ರೀಡೆಗಳಲ್ಲಿ ಪ್ರಗತಿ ಸಾಧಿಸಿ, ಉಳಿದ ಮಕ್ಕಳು ಕೇವಲ ಪ್ರೇಕ್ಷಕರಾಗುವಂತೆ ಮಾಡುತ್ತವೆ. ಈ ಬಗ್ಗೆ ಶಿಕ್ಷಕರು ಚಿಂತನೆ ನಡೆಸಬೇಕು’ ಎಂದು ಹೇಳಿದರು.
ಇಸಿಒ ಕುಬೇರಪ್ಪ ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಬಸವಾಪಟ್ಟಣ ಮತ್ತು ಚಿರಡೋಣಿ ಕ್ಲಸ್ಟರ್ನ 19 ಶಾಲೆಗಳ 900 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕ್ರೀಡೆಗಳಲ್ಲಿ ಸ್ಪರ್ಧಾ ಮನೋಭಾವವಿದ್ದು, ಎಲ್ಲರೂ ನಮ್ಮವರೆಂಬ ಭಾವನೆಯಿಂದ ಪೋಷಕರು ಮತ್ತು ಗ್ರಾಮಸ್ಥರು ಪ್ರೋತ್ಸಾಹ ನೀಡಬೇಕು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಗಂಗಾಧರಸ್ವಾಮಿ, ಫಾತಿಮಾಬಿ, ಸುಮಿತ್ರಮ್ಮ, ರವಿಕುಮಾರ್, ಬಿಆರ್ಸಿ ಬಿ.ಆರ್.ಬಸಪ್ಪ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಂಘದ ಪದಾಧಿಕಾರಿಗಳಾದ ಏಜಾಜ್ ಅಹಮದ್, ಡಿ.ಕೆ.ರಾಜು, ಸಿಆರ್ಪಿಸಿ ರಘುನಾಥ್, ಗ್ರಾಮದ ಮುಖಂಡರಾದ ಕೆ.ಶಿವಮೂರ್ತಿ, ಡಿ.ಕೆ.ರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.