ADVERTISEMENT

ಬಸವರಾಜ ಬೊಮ್ಮಾಯಿ ಕೋಮುವಾದಿ ಮುಖ್ಯಮಂತ್ರಿ: ನಟ ಚೇತನ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 14:45 IST
Last Updated 25 ಡಿಸೆಂಬರ್ 2021, 14:45 IST
ನಟ ಚೇತನ್‌
ನಟ ಚೇತನ್‌   

ದಾವಣಗೆರೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಜಾತ್ಯತೀತ ಮುಖ್ಯಮಂತ್ರಿ ಎಂದುಕೊಂಡಿದ್ದೆವು. ಆದರೆ ಅವರೊಬ್ಬ ಕೋಮುವಾದಿ ಸಿಎಂ. ಅವರ ತಂದೆ ಒಳ್ಳೆಯ ಪ್ರಗತಿಪರ ಮುಖ್ಯಮಂತ್ರಿಯಾಗಿದ್ದರು’ ಎಂದು ನಟ ಚೇತನ್ ವಾಗ್ದಾಳಿ ನಡೆಸಿದರು.

‘ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾಗಿದ್ದು, ಜನರನ್ನು ಹೆದರಿಸಿ, ಬೆದರಿಸಿ ಕಾಯ್ದೆ ಜಾರಿಗೆ ತರುವುದು ತರವಲ್ಲ. ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದರೆ ಕ್ರಮ ಕೈಗೊಳ್ಳಲಿ. ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಟ್ಟುಕೊಂಡು ತರಲು ಹೊರಟಿರುವ ಕಾಯ್ದೆ ಇದಾಗಿದೆ’ ಎಂದು ಮಾಧ್ಯಮದವರಿಗ ಪ್ರತಿಕ್ರಿಯಿಸಿದರು.

‘ಬಸವಣ್ಣನವರು ಅವರದೇ ಆದ ಸ್ವಂತ ಧರ್ಮ ಕಟ್ಟಿದರು. ಅಂಬೇಡ್ಕರ್ 4 ಲಕ್ಷ ಜನರೊಂದಿಗೆ ಬೌದ್ಧ ಧರ್ಮ ಸೇರಿದರು. ಇವೆಲ್ಲಾ ನಮ್ಮ ಅಡಿಪಾಯದಲ್ಲಿವೆ. ಜನರಿಗೆ ಅವರದೇ ಆದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ’ ಎಂದರು.

ADVERTISEMENT

‘ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ವಿರೋಧಿಸುವ ಸ್ವಾಮೀಜಿಗಳು ಬಸವಣ್ಣನವರ ತತ್ವದಡಿಯಲ್ಲಿ ಬದುಕುತ್ತಿದ್ದಾರೆಂದು ಹೇಳಲಾಗುವುದಿಲ್ಲ. ಮಕ್ಕಳ ಬಗ್ಗೆ ಕಾಳಜಿ ಇರುವವರು, ಸಮಸಮಾಜ ಬಯಸುವ ಸ್ವಾಮೀಜಿಗಳು ಮಾತ್ರ ಬಸವಣ್ಣನ ತತ್ವದಡಿ ಬದುಕುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಅಪೌಷ್ಟಿಕತೆ ಮಕ್ಕಳನ್ನು ಕಾಡುತ್ತಿದ್ದು, ಮಕ್ಕಳಿಗೆ ಒಂದಲ್ಲ ಎರಡು ಮೊಟ್ಟೆಗಳನ್ನು ನೀಡಬೇಕು. ತಿನ್ನುವವರಿಗೆ ಮೊಟ್ಟೆ ನೀಡಿ, ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು, ಹಣ್ಣು ನೀಡಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.