ಧರ್ಮಪುರ: ತಾಲ್ಲೂಕಿನ ಗಡಿ ಹೋಬಳಿ ಕೇಂದ್ರವಾಗಿರುವ ಧರ್ಮಪುರ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿದೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಖಂಡೇನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಬೇತೂರು, ಬೇತೂರು ಪಾಳ್ಯ, ಖಂಡೇನಹಳ್ಳಿ ಪಾಳ್ಯ ಹಾಗೂ ಅರಳೀಕೆರೆ ಸಂಪರ್ಕ ರಸ್ತೆಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಗಳು ದುರಸ್ತಿ ಕಾಣದ್ದರಿಂದ ರಾತ್ರಿ ವೇಳೆ ಗುಂಡಿಗಳಿಗೆ ಬಿದ್ದು ಜನರು ಕೈಕಾಲು ಮುರಿದುಕೊಂಡಿದ್ದಾರೆ.
ಬೇತೂರಿನಿಂದ ಚಳ್ಳಕೆರೆ ಗಡಿವರೆಗೂ ಇರುವ ರಸ್ತೆಯ ಸ್ಥಿತಿ ತೀರಾ ಗಂಭೀರವಾಗಿದೆ. ಬಸ್, ಕಾರು, ಲಾರಿ, ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳ ಸಂಚಾರ ತ್ರಾಸದಾಯಕವಾಗಿದ್ದು, ಪ್ರಯಾಣಿಕರು ನಿತ್ಯ ಶಪಿಸುತ್ತಾ ಇಲ್ಲಿ ಓಡಾಡುತ್ತಿದ್ದಾರೆ.
‘ಗ್ಯಾರಂಟಿ ಯೋಜನೆಗಳ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಗ್ರಾಮೀಣ ಜನರ ಆಶೋತ್ತರಗಳನ್ನು ಮರೆತಿದೆ. ಅಭಿವೃದ್ಧಿಯಂತೂ ಮರೀಚಿಕೆಯಾಗಿದೆ. ಕನಿಷ್ಟ ಪಕ್ಷ ಗ್ರಾಮೀಣ ಸಂಪರ್ಕ ರಸ್ತೆಗಳ ಗುಂಡಿಯನ್ನಾದರೂ ಮುಚ್ಚಲಿ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಭಿನಂದನ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.