ADVERTISEMENT

ಬಿಜೆಪಿಗೆ ಮತ ಕೇಳುವ ನೈತಿಕ ಹಕ್ಕು ಇಲ್ಲ: ಸಲೀಂ ಅಹ್ಮದ್

ವಿಧಾನ ಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:28 IST
Last Updated 16 ಏಪ್ರಿಲ್ 2024, 5:28 IST
ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ವಾರ್ಡ್–14 ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು. ಶಾಸಕ ಶಾಮನೂರು ಶಿವಶಂಕರಪ್ಪ, ವಿವಿಧ ವಾರ್ಡ್ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರ ವಾರ್ಡ್–14 ಪ್ರಚಾರ ಸಭೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು. ಶಾಸಕ ಶಾಮನೂರು ಶಿವಶಂಕರಪ್ಪ, ವಿವಿಧ ವಾರ್ಡ್ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯಕ್ಕೆ ಪರಿಹಾರ ನೀಡದ ಕೇಂದ್ರದ ಸರ್ಕಾರ ಮತ ಕೇಳುವ ಹಕ್ಕನ್ನು ಕಳೆದುಕೊಂಡಿದೆ ಎಂದು ವಿಧಾನ ಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಹೇಳಿದರು.

ಇಲ್ಲಿನ ಕಲ್ಲೇಶ್ವರ ರೈಸ್‌ಮಿಲ್‌ನಲ್ಲಿ 14ನೇ ವಾರ್ಡ್‌ನ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬರ ಪರಿಹಾರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿರುವುದರಿಂದ ಜನ ಬದಲಾವಣೆ ಬಯಸುತ್ತಿದ್ದಾರೆ. ಬಿಜೆಪಿಯವರು ಧೈರ್ಯವಿದ್ದರೆ, ಬದ್ಧತೆ ಇದ್ದರೆ ಹೇಳಲಿ. ಕಾಂಗ್ರೆಸ್‌ ಕಾರ್ಯಕ್ರಮಗಳನ್ನು  ನಿಲ್ಲಿಸಬೇಕಾ? ಹಣ ನೀಡುತ್ತೇವೆ ಎಂದು ಅಕ್ಕಿ ಕೇಳಿದರೂ ಕೊಡಲಿಲ್ಲ. ಬರ ಪರಿಹಾರ ಕೊಡಿಸುವಲ್ಲಿ ವಿಫಲರಾದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.

ADVERTISEMENT

ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಗ್ಗೆ ಆಂತರಿಕ ಸಮೀಕ್ಷೆ, ಜನರ ಒಲವು ಇದ್ದು, ಅವರು ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ. ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮಗಳು ಗೆಲುವಿಗೆ ಸಹಕಾರಿಯಾಗಲಿವೆ. ಪ್ರಭಾ ಮಲ್ಲಿಕಾರ್ಜುನ್ ಅವರು ಶಾಸಕ, ಸಂಸದರಾಗದಿದ್ದರೂ ನಿಸ್ವಾರ್ಥದಿಂದ ಸಮಾಜಸೇವೆ ಮಾಡಿಕೊಂಡಿದ್ದಾರೆ. ಪಕ್ಷದ ಫೀಡ್‌ಬ್ಯಾಕ್ ತೆಗೆದುಕೊಂಡು ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದರು.

ಕಾಂಗ್ರೆಸ್ ನಿನ್ನೆ ಮೊನ್ನೆಯ ಪಕ್ಷವಿಲ್ಲ, ಬೃಹತ್ ಇತಿಹಾಸವಿದೆ. ಇಂದಿರಾಗಾಂಧಿ ಅವರು 16 ವರ್ಷ ಪ್ರಧಾನಿಯಾಗಿದ್ದರು. ಅವರು ರೂಪಿಸಿದ 20 ಅಂಶಗಳ ಕಾರ್ಯಕ್ರಮ, ಮಹಿಳೆಯರ ಬಗ್ಗೆ ಚಿಂತನೆ, ‘ಉಳುವವನೇ ಒಡೆಯ’ ಯೋಜನೆಗಳು ಜನಪ್ರಿಯವಾಗಿವೆ. ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗಾಮಾತೆ ಎಂದು ಹೊಗಳಿದ್ದರು. ರಾಜೀವ್‌ಗಾಂಧಿ ಸಂಪರ್ಕ ಕ್ರಾಂತಿಯನ್ನು ಮಾಡಿದರು’ ಸ್ಮರಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಸ್ಲಿಂ ಸಮಾಜದ ಅಧ್ಯಕ್ಷ ದಾದುಸೇಟ್, ಧರ್ಮಗುರುಗಳಾದ ಇಬ್ರಾಹಿಂ ಸಖಾಫಿ, ಮಹಾನಗರ ಪಾಲಿಕೆ ಸದಸ್ಯರಾದ ಕೆ.ಚಮನ್‌ಸಾಬ್, ಎ.ಬಿ.ರಹೀಂ ಸಾಬ್, ಜಾಕೀರ್ ಅಲಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.