ಸಂತೇಬೆನ್ನೂರು: ಕೋವಿಡ್ ಅಲೆ ಕಡಿಮೆಯಾಗುತ್ತಿರುವುದರಿಂದ ಸೂಳೆಕೆರೆಯಲ್ಲಿ ವಿನೂತನ ದೋಣಿ ವಿಹಾರದ ಸೌಲಭ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ತುಂಬಿ ತುಳುಕುವ ಕೆರೆ ನೀರಿನಲ್ಲಿ ತಂಗಾಳಿ ಸ್ಪರ್ಶದೊಂದಿಗೆ ತೊಯ್ದಾಡುವ ದೋಣಿ ಚಾಲನೆ ಮನೋಲ್ಲಾಸ ನೀಡುತ್ತಿದೆ.
ಈಚೆಗೆ ಎರಡು ಆಧುನಿಕ ರ್ಯಾಫ್ಟರ್ ಹಾಗೂ ಕಯಾಕಿಂಗ್ ದೋಣಿಗಳನ್ನು ಪರಿಕ್ಷಾರ್ಥ ನೀರಿಗಿಳಿಸಲಾಗಿದೆ. ತಲಾ 12 ಜನ ಕುಳಿತುಕೊಳ್ಳುವ 2 ರ್ಯಾಫ್ಟರ್ ದೋಣಿಗಳಿವೆ. ಪ್ರವಾಸಿಗರಿಗೇ ಹುಟ್ಟು ಹಾಕುವ ಅವಕಾಶ ನೀಡಲಾಗಿದೆ. ಇಬ್ಬರು ಹಾಗೂ ಒಬ್ಬರೇ ತೇಲುವ ಕಯಾಕಿಂಗ್ನ 3 ದೋಣಿಗಳಿವೆ. ದೋಣಿ ವಿಹಾರ ಕೇಂದ್ರದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಹುದು.
‘ಪ್ರತಿಯೊಬ್ಬರಿಗೆ ತಲಾ ₹ 100 ಶುಲ್ಕ ನಿಗದಿಗೊಳಿಸಲಾಗಿದೆ. ಜೀವ ರಕ್ಷಕ ಜಾಕೆಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು. ಒಮ್ಮೆ 30 ನಿಮಿಷ ದೋಣಿ ವಿಹಾರ ನಡೆಸಲು ಪ್ರವಾಸಿಗರಿಗೆ ಅವಕಾಶವಿದೆ. ಜಂಗಲ್ ಲಾಡ್ಜನ ‘ಮಾನಸ ಅಡ್ವೆಂಚರ್ಸ್’ ದೋಣಿ ವಿಹಾರದ ಸೌಲಭ್ಯ ನೀಡುತ್ತಿದೆ’ ಎನ್ನುತ್ತಾರೆ ಜಂಗಲ್ ಲಾಡ್ಜಸ್ ವ್ಯವಸ್ಥಾಪಕರಾದ
ರೂಪೇಶ್.
‘ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ದೋಣಿ ವಿಹಾರ ಸಂತಸ ನೀಡುತ್ತಿದೆ. ಕೇರಳ ರಾಜ್ಯದಲ್ಲಿರುವಂತೆ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳಬೇಕು. ದೋಣಿ ವಿಹಾರ ಸೌಲಭ್ಯ ಈ ನಿಟ್ಟಿನಲ್ಲಿ ಬೃಹತ್ ಹೆಜ್ಜೆ ಆಗಿದೆ’ ಎನ್ನುತ್ತಾರೆ ಪ್ರವಾಸಿಗ ಯತೀಶ್.
ಸೌಲಭ್ಯ ಹೆಚ್ಚಿಸುವ ಪ್ರಯತ್ನ
ಗಣರಾಜ್ಯೋತ್ಸವದ ನಿಮಿತ್ತ ಸೂಳೆಕೆರೆಯಲ್ಲಿ ಮೊಮ್ಮಕ್ಕಳೊಂದಿಗೆ ದೋಣಿ ವಿಹಾರ ಮಾಡಿದ್ದು ಸಂತಸ ನೀಡಿದೆ. ಕೋವಿಡ್ ನಂತರ ಪ್ರವಾಸಿಗರನ್ನು ಆಕರ್ಷಿಸಲು ಸೌಲಭ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ. ಮಾಡಾಳ್ ವಿರೂಪಾಕ್ಷಪ್ಪ, ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಯಮಿತದ ಅಧ್ಯಕ್ಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.