ದಾವಣಗೆರೆ: ಮಕರ ಸಂಕ್ರಾಂತಿಯನ್ನು ಸ್ವಾಗತಿಸಲು ಜಿಲ್ಲೆಯ ಜನರು ಸಂಭ್ರಮದಿಂದ ಸಜ್ಜಾಗಿದ್ದಾರೆ. ಹಾಗಾಗಿ ಬುಧವಾರ ಕಬ್ಬು, ಎಳ್ಳು-ಬೆಲ್ಲ, ಸಕ್ಕರೆ,ರೊಟ್ಟಿ ಖರೀದಿ ಜೋರಾಗಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕಬ್ಬನ್ನು ತಂದು ಮಾರಾಟ ನಗರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಬೆಲೆ ಏರಿಕೆಯಾಗಿದ್ದರೂ ಗ್ರಾಹಕರು ತಲೆಕೆಡಿಸಿಕೊಳ್ಳದೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಗ್ರಾಹಕರಲ್ಲಿ ಮಹಿಳೆಯರೇ ಹೆಚ್ಚು ಕಂಡು ಬಂದರು. ಹಳೆ ದಾವಣಗೆರೆ, ನಿಟುವಳ್ಳಿ, ಜಯದೇವ ಸರ್ಕಲ್ನಿಂದ ಪಿ.ಬಿ. ರಸ್ತೆಗೆ ಹೋಗುವ ಮಾರ್ಗ ಸಹಿತ ವಿವಿಧೆಡೆ ವ್ಯಾಪಾರ ಕಂಡು ಬಂತು. ಎಳ್ಳುಬೆಲ್ಲದ ಪ್ಯಾಕೆಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಹೂವು, ಹಣ್ಣು, ದೀಪದ ಬತ್ತಿ, ರಂಗೋಲಿ ಹುಡಿಗಳಿಗೂ ಬೇಡಿಕೆ ಇತ್ತು.
ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ಗ್ರಾಮ ದೇವತೆ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಸಹಿತ ಎಲ್ಲ ದೇವಾಲಯಗಳನ್ನು ಅಲಂಕರಿಸಲಾಗಿತ್ತು. ಬುಧವಾರ ರಾತ್ರಿಯೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.
ಸಂಕ್ರಾಂತಿಯ ದಿನವಾದ ಗುರುವಾರ ಬೆಳಿಗ್ಗೆ ಮನೆಯಲ್ಲಿ ಪೂಜೆ ಸಲ್ಲಿಸಿ, ದೇಗುಲಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಲಿದ್ದಾರೆ. ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಎಳ್ಳು ಬೀರಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.