ADVERTISEMENT

ದಾವಣಗೆರೆಯಲ್ಲಿ ‘ಕ್ಯಾನ್ಸರ್ ನಡೆ' ಬೃಹತ್ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 7:07 IST
Last Updated 13 ಅಕ್ಟೋಬರ್ 2019, 7:07 IST
ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಕ್ಯಾನ್ಸರ್ ನಡೆ' ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ನಡೆದ ‘ಕ್ಯಾನ್ಸರ್ ನಡೆ' ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.   

ದಾವಣಗೆರೆ: ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ‘ಕ್ಯಾನ್ಸರ್ ನಡೆ' ಜಾಗೃತಿ ಜಾಥಾ ನಡೆಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿ ‘ಕ್ಯಾನ್ಸರ್ ಜಾಗೃತಿ ಜಾಥಾಗಳು ಹೆಚ್ಚಾಗಿ ನಡೆಯಬೇಕು. ಪ್ರತಿವರ್ಷವೂ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಎಂದು ಸಂಘಟಕರಿಗೆ ಸಲಹೆ ನೀಡಿದ ಅವರು, ಜಿಲ್ಲಾಡಳಿತದಿಂದ ಸಹಕಾರ ನೀಡುತ್ತೇನೆ' ಎಂದು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಂತನಾಡಿ, ‘ಮನುಷ್ಯನಿಗೆ ಆರೋಗ್ಯ, ಶಕ್ತಿ ಬಹಳ ಮುಖ್ಯ, ಪ್ರತಿ ದಿವಸ ವ್ಯಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು' ಎಂದು ಸಲಹೆ ನೀಡಿದರು.

ADVERTISEMENT

ನಗರದ ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಿಂದ ಆರಂಭವಾದ ಜಾಥಾ, ಚಿಗಟೇರಿ ಆಸ್ಪತ್ರೆಯ ಮೂಲಕ ವಿದ್ಯಾರ್ಥಿ ಭವನ ತಲುಪಿತು. ಹದಡಿ ರಸ್ತೆಯ ಮೂಲಕ ಅಂಬೇಡ್ಕರ್ ವೃತ್ತ ಆನಂತರ ಜಯದೇವ ವೃತ್ತದ ಮೂಲಕ ಸಾಗಿ ಗಾಂಧಿವೃತ್ತದಿಂದ ಮಹಾನಗರಪಾಲಿಕೆ ಆವರಣಕ್ಕೆ ತಲುಪಿತು. ಆನಂತರ ಹೈಸ್ಕೂಲ್ ಮೈದಾನದಿಂದ ಎವಿಕೆ ರಸ್ತೆಯ ಮೂಲಕ ರಾಮ್ ಅಂಡ್ ಕೊ ವೃತ್ತ ಹಾಗೂ ಚರ್ಚ್‌ ರಸ್ತೆಯ ಮೂಲಕ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ತಲುಪಿತು.

4 ಕಿ.ಮೀ. ನಡೆದ ಈ ಜಾಥಾದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಒಂದು ಕಿ.ಮೀ. ನಡೆದು ಜಾಗೃತಿ ಮೂಡಿಸಿದರು.

ದಾವಣಗೆರೆಯ ಸಿದ್ದಗಂಗಾ ಶಾಲೆ, ಬಿಐಇಟಿ, ಯುಬಿಟಿಡಿ ಎಂಜಿನಿಯರ್, ಮೆಡಿಕಲ್, ಡೆಂಟಲ್, ಐಟಿಐ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಾಯುವಿಹಾರಿಗಳು, ಮಹಿಳೆಯರು ಸೇರಿ 1000ಕ್ಕೂ ಹೆಚ್ಚು ಜನ ಪಾಲ್ಗೊಂಡು ಅರಿವು ಮೂಡಿಸಿದರು.

ಭಾರತೀಯ ರೆಡ್‌ಕ್ರಾಸ್‌ನ ಸ್ಥಳೀಯ ಘಟಕ, ಲೈಫ್‌ಲೈನ್ ಸಂಸ್ಥೆ, ದಾವಣಗೆರೆ ವಿವಿ, ಜಿಲ್ಲಾ ವರದಿಗಾರರ ಕೂಟ, ಹೈದ್ರಾಬಾದ್‌ನ ಗ್ರೇಸ್ ಕ್ಯಾನ್ಸರ್ ಫೌಂಡೇಷನ್, ಭಾರತೀಯ ವೈದ್ಯಕೀಯ ಸಂಘ, ಭಾರತೀಯ ಭಾರತೀಯ ವಿಕಾಸ ಪರಿಷತ್, ಲಯನ್ಸ್ ಕ್ಲಬ್, ರೋಟರಿ ಇಂಟರ್ ನ್ಯಾಷನಲ್, ದಾವಣಗೆರೆ ಎಂಜಿನಿಯರ್ಸ್ ಅಸೋಸಿಯೇಷನ್‌ಗಳು ಜಾಥಾವನ್ನು ಬೆಂಬಲಿಸಿದವು.

ಕಲಾವಿದ ಆರ್.ಟಿ. ಅರುಣ್‌ಕುಮಾರ್, ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಅಧ್ಯಕ್ಷ ಡಾ.ಶ್ರೀಶೈಲ ಎಸ್. ಬ್ಯಾಡಗಿ, ಡಾ.ಸುನಿಲ್ ಎಸ್. ಬ್ಯಾಡಗಿ, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಹಾಗೂ ಲೈಫ್‌ಲೈನ್‌ ಫ್ಲೈನ್ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಘವೇಂದ್ರರಾವ್, ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಬಿ.ಎಸ್. ಚನ್ನಬಸಪ್ಪ ಸಂಸ್ಥೆಯ ಪಿ.ಸಿ. ಉಮಾಪತಿ, ಜ್ಯೋತಿ ಗ್ಯಾಸ್ ಏಜೆನ್ಸಿಯ ಆನಂದ್‌ಕುಮಾರ್, ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ, ಬಿಜೆಪಿ ಮುಖಂಡ ಉಮೇಶ್ ಪಟೇಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.