ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್, ಹಾಗೂ ಡಿಎಚ್ಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸತ್ಯನಾರಾಯಣರಾವ್ ಕೆ.ಜಿ. ಅವರ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಾಗಿದೆ.
‘ಹಂಚಿಕೆ ಮಾಡಿದ ವಾಹನವನ್ನು ತೆಗೆದುಹಾಕಿರುವ ಪ್ರಶ್ಬಿಸಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದಕ್ಕೆ ಡಿಎಚ್ಒ ಅವರು ನನ್ನನ್ನು ನಿಂದಿಸುತ್ತಿರುವಾಗ ಸತ್ಯನಾರಾಯಣರಾವ್ ಅದನ್ನು ಸಮರ್ಥಿಸಿಕೊಂಡಿದ್ದಾರೆ‘ ಎಂದು ಕಚೇರಿಯ ಸಹಾಯಕ ಆಡಳಿತಾಧಿಕಾರಿ ಜಿ. ನಿಜಲಿಂಗಪ್ಪ ಅವರು ದೂರು ನೀಡಿದ್ದಾರೆ.
‘ಕೆಪಿಎಂಇ ಹಾಗೂ ಪಿಸಿ ಮತ್ತು ಪಿಎನ್ಡಿಟಿ ಕಡತಗಳನ್ನು ನನಗೆ ಕಳುಹಿಸುತ್ತಿರಲಿಲ್ಲ. ಈ ವಿಷಯವಾಗಿ ಕೇಳಿದರೆ ನೀನು ಕೀಳು ಜಾತಿಯವನು, ನಿನಗೆ ಇಂತಹ ಕೆಲಸಗಳನ್ನು ಮಾಡಲು ಬರುವುದಿಲ್ಲ. ಈ ವಿಷಯದಲ್ಲಿ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿ ಬಂದಾಗ ನೀನು ಮಾಡು ಎಂದು ಅರ್ಜಿ ನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಕೋವಿಡ್–19 ಹಿನ್ನೆಲೆಯಲ್ಲಿ ವಯೋಸಹಜ ಕಾಯಿಲೆ ಹಿನ್ನೆಲೆಯಲ್ಲಿ 50 ವರ್ಷ ಮೇಲ್ಪಟ್ಟವರಿಗೆ ರಜೆ ನೀಡಬೇಕು ಎಂಬ ಆದೇಶವಿದ್ದು, 60 ವರ್ಷವಾಗಿರುವ ನಾನು ರಜೆ ಕೇಳಿದರೆ ಮಂಜೂರು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸತ್ಯನಾರಾಯಣರಾವ್ ಅವರ ಪತ್ನಿಗೆ 34 ವರ್ಷವಾಗಿದ್ದು, ಅವರಿಗೆ ರಜೆ ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
‘ಕಚೇರಿಯ ಪಾಸ್ ಹಾಗೂ ಚೆಕ್ ಪುಸ್ತಕಗಳನ್ನು ಕಚೇರಿಯ ಆಡಳಿತಾತ್ಮಕ ಹಾಗೂ ಲೆಕ್ಕ ಅಧಿಕಾರಿಯಾದ ನನ್ನ ಗಮನಕ್ಕೆ ತಾರದೇ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆಗಾಗಿ ಡಿಎಚ್ಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಲಭ್ಯರಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.