ಹೊನ್ನಾಳಿ: ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಭದ್ರಾ ನಾಲೆಗೆ ಕಾಲು ಜಾರಿ ಬಿದ್ದು ಎರಡು ವರ್ಷ ವಯಸ್ಸಿನ ಮಗುವೊಂದು ಮೃತಪಟ್ಟಿದೆ.
ಯಕ್ಕನಹಳ್ಳಿ ಗ್ರಾಮದ ಗದ್ದೇರ ಬಿ. ರೇವಣಸಿದ್ಧಪ್ಪ ಅವರ ಪುತ್ರ ಜಿ.ಆರ್. ಮನೋಜ್ಕುಮಾರ್ ಮೃತ ಬಾಲಕ.
ಘಟನೆಯ ವಿವರ: ಜಾನುವಾರುಗಳಿಗೆ ಬಣವೆಯಿಂದ ಮೇವು ತೆಗೆದುಕೊಂಡು ಬರಲು ಯಕ್ಕನಹಳ್ಳಿ ಗ್ರಾಮದ ಭದ್ರಾ ನಾಲೆ ದಂಡೆಯಲ್ಲಿನ ಕಣಕ್ಕೆ ಮನೋಜ್ಕುಮಾರ್ನ ಹಿರಿಯ ಸಹೋದರ ಜಿ.ಆರ್. ಯಶವಂತ್ ಹೋಗಿದ್ದ. ಅಣ್ಣನನ್ನು ಹಿಂಬಾಲಿಸಿದ ಮನೋಜ್ಕುಮಾರನೂ ಹೋಗಿದ್ದ. ಆದರೆ, ಇದನ್ನು ಗಮನಿಸದ ಯಶವಂತ್ ಬಣವೆಯಿಂದ ಮೇವು ತೆಗೆದುಕೊಂಡು ಮನೆಗೆ ಮರಳಿದ. ಒಂದೆರಡು ಗಂಟೆಗಳಾದರೂ ಮಗು ಕಾಣಿಸದ ಕಾರಣ ಪೋಷಕರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದರು. ಕೊನೆಗೆ ನಾಲೆಯ ಬಳಿ ಬಾಲಕನ ಹೆಜ್ಜೆ ಗುರುತುಗಳನ್ನು ಗಮನಿಸಿ ನಾಲೆಗೆ ಬಿದ್ದಿರಬಹುದು ಎಂಬ ಅನುಮಾನದಿಂದ ನಾಲೆಗುಂಟ ಪಯಣಿಸಿ ಹುಡುಕಾಡಿದರು. ಸುಮಾರು ಎರಡು ಗಂಟೆಗಳ ಶೋಧದ ನಂತರ ಬಾಲಕನ ಶವ ತಾಲ್ಲೂಕಿನ ಚಿಕ್ಕಹಾಲಿವಾಣ ಹಾಗೂ ಹರಿಹರ ತಾಲ್ಲೂಕು ಕೊಪ್ಪ ಗ್ರಾಮಗಳ ಮಧ್ಯೆ ನಾಲೆಯಲ್ಲಿ ಪತ್ತೆಯಾಯಿತು.
ಸಂಜೆ ಗ್ರಾಮದಲ್ಲಿ ಬಾಲಕನ ಅಂತ್ಯಕ್ರಿಯೆ ನಡೆಸಲಾಯಿತು. ಬಾಲಕನ ಶವದ ಎದುರು ತಂದೆ-ತಾಯಿ ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.