ದಾವಣಗೆರೆ: ಚೀನಾ ವಸ್ತುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಲ್ಲಿನ ಗುಂಡಿ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಚೀನಾದ ಮೊಬೈಲ್ ಹಾಗೂ ಮಕ್ಕಳ ಆಟಿಕೆಗಳನ್ನು ಮೇಲಿನಿಂದ ಎತ್ತಿ ಹಾಕಿ, ಕಲ್ಲಿನಿಂದ ಜಜ್ಜಿ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್. ಕೆ. ಶೆಟ್ಟಿ ಮಾತನಾಡಿ, ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ನಾವೆಲ್ಲ ಉಪಯೋಗಿಸೋಣ ಎಂದು ಸಲಹೆ ನೀಡಿದ ಅವರು, ಚೀನಾ ವಸ್ತುಗಳ ಆಮದನ್ನು ನಿಷೇಧಿಸಬೇಕು’ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜು ಮಾತನಾಡಿ, ‘ದೇಶದ ಭದ್ರತೆ ಮತ್ತು ಸೈನಿಕರಿಗೆ ನಾವು ಬೆಂಬಲ ನೀಡುತ್ತೇವೆ. ಆದರೆ ನಮ್ಮ ಸೈನಿಕರ ಮೇಲೆ ನಡೆದ ದಾಳಿಗೆ ನಾವು ಪ್ರತೀಕಾರ ತೀರಿಸಬೇಕು. ‘ಟಿಕ್ ಟಾಕ್’ ಆ್ಯಪ್ನಂತೆ ಸರ್ಕಾರ ಚೀನಾ ವಸ್ತುಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್ ‘ ಚೀನಾ ವಸ್ತುಗಳನ್ನು ಖರೀದಿಸುವುದಿಲ್ಲ ದೇಶದ ಪ್ರತಿಯೊಬ್ಬರೂ ಪ್ರಮಾಣ ಮಾಡುವ ಮೂಲಕ ದೇಶಾಭಿಮಾನ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ ‘ಚೀನಾ ವಸ್ತುಗಳನ್ನು ನಾವು ಉಪಯೋಗಿಸುವುದರಿಂದ ನಮ್ಮ ದೇಶದಲ್ಲಿ ಗುಡಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಪೆಟ್ಟು ಬೀಳುತ್ತಿದೆ. ಆರ್ಥಿಕ ಸ್ಥಿತಿ ಪತನದತ್ತ ಸಾಗುತ್ತಿದೆ’ ಎಂದು ತಿಳಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅನಿತಾ ಬಾಯಿ ಮಾಲತೇಶ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಗೌರಿ ಗಣೇಶ ಹಾಗೂ ದೀಪಾವಳಿ ಹಬ್ಬಗಳಲ್ಲಿಯೂ ಚೀನಾ ವಸ್ತುಗಳನ್ನು ಬಳಸದೇ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಉಪಯೋಗಿಸಿ ಎಂದು ಕರೆ ನೀಡಿದರು.
ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್ ಮುಖಂಡರಾದ ದಾದಾಪೀರ್, ಕೆ.ಎಲ್. ಹರೀಶ್ ಬಸಾಪುರ, ಮುಜಾಹಿದ್, ಶಶಿಧರ್ ಪಾಟೀಲ್, ಹಾಲೇಶ್, ಪ್ರವೀಣ್ ಕುಮಾರ್, ಲಿಯಾಖತ್ ಅಲಿ, ರಾಕೇಶ್, ಅಬ್ದುಲ್ ಜಬ್ಬಾರ್, ಯುವರಾಜ್, ಹಾಲೇಶ್ ಬಸವನಾಳ, ನವೀನ್, ಗಂಗಾಧರ್, ಮಾರುತಿ, ಆಶಾ ಮುರಳಿ, ಜಯಶ್ರೀ, ರಾಧಾಬಾಯಿ, ದಿಶಾ, ಸಂಗಮ್ಮ, ಮಂಜುಳಾ, ಮಂಗಳಾ, ಮಂಜಮ್ಮ, ಗೀತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಸುನಿತಾ ಭೀಮಣ್ಣ, ಇಂದ್ರಮ್ಮ ಉಪಸ್ಥಿತರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.