ADVERTISEMENT

ಕೇಂದ್ರ ನಾಯಕರಿಂದ ಸಿಎಂಗೆ ರಕ್ಷಣೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ

ಸಚಿವ ಸಂಪುಟ ವಿಸ್ತರಣೆ ಗೊಂದಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 12:31 IST
Last Updated 4 ಡಿಸೆಂಬರ್ 2020, 12:31 IST
ಕೆ.ಎಸ್‌. ಈಶ್ವರಪ್ಪ 
ಕೆ.ಎಸ್‌. ಈಶ್ವರಪ್ಪ    

ದಾವಣಗೆರೆ: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕೇಂದ್ರದ ನಾಯಕರು ಮುಖ್ಯಮಂತ್ರಿಯನ್ನು ಹಿಡಿತದಲ್ಲಿಟ್ಟುಕೊಂಡಿಲ್ಲ. ಬದಲಾಗಿ ಮುಖ್ಯಮಂತ್ರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿಪಾದಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕೇಂದ್ರ ನಾಯಕರು ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದ್ದಾರೆಯೇ ಎಂದು ಸುದ್ದಿಗಾರರು ಶುಕ್ರವಾರ ಕೇಳಿದ ಪ್ರಶ್ನೆಗೆ, ‘ಸರ್ಕಾರ ಕಳೆದುಕೊಳ್ಳಬೇಕು ಎಂಬ ಇಚ್ಛೆ ಪಕ್ಷಕ್ಕೆ ಇಲ್ಲ. ಹೀಗಾಗಿ ಕೇಂದ್ರದ ನಾಯಕರು ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮುಖ್ಯಮಂತ್ರಿ ಯಾರನ್ನೋ ಸಚಿವರನ್ನಾಗಿ ಮಾಡಿದರೆ ಇನ್ನೊಬ್ಬರು ಪ್ರಶ್ನೆ ಮಾಡುತ್ತಾರೆ. ಅದರ ಬದಲು ಕೇಂದ್ರದವರು ಸೂಚಿಸಿದಂತೆ ಮಾಡಿದಾಗ ಮುಖ್ಯಮಂತ್ರಿಯೂ ಸುರಕ್ಷಿತವಾಗಿರುತ್ತಾರೆ’ ಎಂದು ಉತ್ತರಿಸಿದರು.

ಗೋಹತ್ಯೆ ಬಗ್ಗೆ ನಿಲುವು ಪ್ರಕಟಿಸಲಿ: ಇದಕ್ಕೂ ಮೊದಲು ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ‘ಲವ್‌ ಜಿಹಾದ್ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರು ಎಲ್ಲಿಗೆ ಹೋಗಿ ಬೇಕಾದರೂ ಮದುವೆ ಮಾಡಿಕೊಳ್ಳಲು ಅವಕಾಶ ಕೊಡುತ್ತೇವೆ; ಎಲ್ಲಿ ಬೇಕಾದರೂ ಗೋಹತ್ಯೆ ಮಾಡಲು ಅವಕಾಶ ನೀಡುತ್ತೇವೆ ಎಂಬ ಕಾಯ್ದೆಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಘೋಷಿಸಿ, ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.