ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್ ಅವರ ತಂಡ ಭಾನುವಾರ ಸಿ.ಜಿ. ಆಸ್ಪತ್ರೆ ಸೇರಿ ವಿವಿಧ ಕಡೆ ಭೇಟಿ ನೀಡಿ ಪರಿಶೀಲಿಸಿತು.
ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಸೇರಿದಂತೆ ಅಲ್ಲಿನ ಸ್ಥಿತಿಗತಿಗಳನ್ನು ಎಸ್ಪಿ ಕೂಲಂಕಷವಾಗಿ ಪರಾಮರ್ಶಿಸಿ ಡಿಎಚ್ಒ ಡಾ. ನಾಗರಾಜ್ ಮತ್ತು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್ ಅವರೊಂದಿಗೆ ಚರ್ಚಿಸಿದರು.
‘ಕೊರೊನಾ ಉಲ್ಬಣವಾಗುತ್ತಿರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳ ಮೇಲ್ವಿಚಾರಣೆ ಮಾಡುವವರು ಹಾಗೂ ರೋಗಿಗಳ ಸಂಬಂಧಿಕರು ಅನಗತ್ಯವಾಗಿ ಸಂಚರಿಸುವವರನ್ನು ನಿರ್ಬಂಧಿಸಬೇಕು’ ಎಂದು ಆಸ್ಪತ್ರೆಯ ಅಧೀಕ್ಷಕರಿಗೆ ಸೂಚಿಸಿದರು.
ಆಸ್ಪತ್ರೆಯ ಎಲ್ಲಾ ವಾರ್ಡ್ಗಳನ್ನು ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಹಿಂಭಾಗದ ತುರ್ತು ಚಿಕಿತ್ಸಾ ಕೊಠಡಿ, ಕೋವಿಡ್ ಫ್ಲೂ ಕಾರ್ನರ್ ಅನ್ನು ವೀಕ್ಷಿಸಿದರು. ಆಮ್ಲಜನಕ ಸರಬರಾಜು ಆಗುವ ಕೊಠಡಿಗೆ ತೆರಳಿ ಜಂಬೋ ಸಿಲಿಂಡರ್ಗಳ ಮಾಹಿತಿ ಪಡೆದರು. ಮುಖ್ಯದ್ವಾರದ ಬಳಿ ಇರುವ ಆಮ್ಲಜನಕ ಶೇಖರಣಾ ಘಟಕದ ಬಳಿ ತೆರಳಿ ವೀಕ್ಷಿಸಿದರು.
ಸೀಲ್ಡೌನ್ ಗ್ರಾಮಗಳಿಗೆ ಭೇಟಿ
ಹೆಚ್ಚಿನ ಕೋವಿಡ್ ಪ್ರಕರಣಗಳಿಂದಾಗಿ ಕಂಟೈನ್ಮೆಂಟ್ ವಲಯಗಳಾಗಿ ಗುರುತಿಸಲಾದ ದಾವಣಗೆರೆ ತಾಲ್ಲೂಕಿನ ಕೈದಾಳೆ, ಕುರ್ಕಿ, ಕುಕ್ಕುವಾಡ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ತಂಡ ಮಹಾಂತೇಶ ಬೀಳಗಿ ತಂಡ ಭೇಟಿ ನೀಡಿತು.
‘ಪ್ರಕರಣಗಳು ಹೆಚ್ಚಿರುವ ಕಾರಣದಿಂದ ನಿಮ್ಮ ಗ್ರಾಮಗಳನ್ನು ಸೀಲ್ಡೌನ್ ಮಾಡಲಾಗಿದೆ. ಹೊರಗೆ ಅಡ್ಡಾಡಿದಿರಿ. ಕೋವಿಡ್ ದೃಢಪಟ್ಟವರನ್ನು ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲು ನೆರವಾಗಿ. ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವ ಮೂಲಕ ಸೋಂಕುಮುಕ್ತ ಗ್ರಾಮಗಳಾಗಿಸಲು ಸಹಕರಿಸಿ’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಗ್ರಾಮದ ಜನತೆಗೆ ಲಸಿಕೆ ನೀಡುವ ಕಾರ್ಯ ಚುರುಕುಗೊಳಿಸುವಂತೆ ಡಿಎಚ್ಒಗೆ ಸೂಚಿಸಿದರು. ಕರೊನಾದಿಂದ ಮೃತ ಪಟ್ಟ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ತಹಶೀಲ್ದಾರ್ ಬಿ.ಎನ್. ಗಿರೀಶ್, ಡಿಎಚ್ಒ ಡಾ. ನಾಗರಾಜ್, ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್, ಡಾ.ಶಶಿಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.