ಮಲೇಬೆನ್ನೂರು:ಧಾರ್ಮಿಕ ಆಚರಣೆಗೆ ಒತ್ತು ನೀಡುವಂತೆ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.
ಸಮೀಪದ ಹಿರೆಹಾಲಿವಾಣ ಗ್ರಾಮದ ಬೀರಲಿಂಗೇಶ್ವರ ಮರಿಬನ್ನಿ ಉತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಹಬ್ಬದ ವೇಳೆ ಪ್ರಾಣಿಬಲಿ ನೀಡಬೇಡಿ. ಹಬ್ಬ ಮಾಡಿ ಸಾಲದ ಬಲೆಗೆ ಸಿಲುಕಬಾರದು. ಇದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಸಮಾಜ ಸುಧಾರಣೆಗೆ ಹೆಚ್ಚು ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.
ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಸಾಮೂಹಿಕ ವಿವಾಹದಿಂದ ದುಂದುವಚ್ಚಕ್ಕೆ ಕಡಿವಾಣ ಹಾಕಬಹುದು. ದಂಪತಿ ಆದರ್ಶದ ಬದುಕು ಸಾಗಿಸಿ’ ಎಂದರು.
ಹದಡಿ ಪರಮಹಂಸ ಮುರುಳೀಧರ ಸ್ವಾಮೀಜಿ ನೂತನ ವಧುವರರಿಗೆ ಶುಭ ಹಾರೈಸಿದರು.
ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ಪಿ.ಎಸ್. ಹನುಮಂತಪ್ಪ, ಮಾಗಾನಹಳ್ಳಿ ಹಾಲಪ್ಪ, ಗ್ರಾಮಸ್ಥರು ಇದ್ದರು.
ಎಸ್.ಜಿ. ಪರಮೇಶ್ವರಪ್ಪ ಸ್ವಾಗತಿಸಿದರು. ಎಸ್.ಜಿ. ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಡಿ. ರೇವಣಸಿದ್ದಪ್ಪ ನಿರೂಪಿಸಿದರು. ಕುಡುಪಲಿ ತಿಪ್ಪೇಶ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.