ದಾವಣಗೆರೆ: ಕೋವಿಡ್–19ನಿಂದ ಗುಣಮುಖರಾಗಿ ಬಂದ ಇಲ್ಲಿನ ಭಾಷಾನಗರದ ಸ್ಟ್ಯಾಫ್ ನರ್ಸ್ (ರೋಗಿ ಸಂಖ್ಯೆ 533) ವಿರುದ್ಧ ನಿಂದನಾತ್ಮಕ ಬರಹ ಬರೆದಿದ್ದ ‘ಒಂದು ವಾಣಿ’ (vandu vani) ಫೇಸ್ಬುಕ್ ಪೇಜ್ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾನು ಸೇವೆ ಸಲ್ಲಿಸುತ್ತಿದ್ದ ಪ್ರಸೂತಿ ಕೇಂದ್ರವು ಬಡ ಕೂಲಿ ಕಾರ್ಮಿಕರು ವಾಸ ಮಾಡುವಂತಹ ಪ್ರದೇಶವಾಗಿದ್ದು, ಬಹಳಷ್ಟು ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯ ಅವಧಿಗಿಂತ ಮೀರಿ ಹೆಚ್ಚಿನ ಸಮಯ ಸೇವೆಯನ್ನು ಸಲ್ಲಿಸುತ್ತಿದ್ದೆ. ದುರಾದೃಷ್ಟವಶಾತ್ ಯಾರೋ ಒಬ್ಬ ರೋಗಿಯಿಂದ ನನಗೆ ಕೋವಿಡ್-19 ಸೊಂಕು ತಗಲಿದ್ದು, ಇಡೀ ದಾವಣಗೆರೆ ನಗರದಲ್ಲಿ ದೊಡ್ಡ ಮಟ್ಟದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಹೇಳಿಕೆಗಳು ಹರಿದಾಡಿವೆ’ ಎಂದು ಸ್ಟ್ಯಾಫ್ ನರ್ಸ್ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
‘ಈ ಫೇಸ್ಬುಕ್ ಪೇಜ್ನಲ್ಲಿ ನಿಂದನಾತ್ಮಕ ಬರಹ ಬರೆದಿದ್ದು, ನನ್ನಂತೆ ಇತರರಿಗೂ ಮಾನಹಾನಿಯಾಗಬಾರದು. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮನಸ್ಸಿಗೆ ನೋವಾಗುವಂತೆ ಹಾಗೂ ಸಮಾಜದಲ್ಲಿ ತಲೆ ಎತ್ತಿ ಬದುಕದಂತೆ ತನ್ನ ಸ್ತ್ರೀತನಕ್ಕೆ ಧಕ್ಕೆ ತರುವಂತೆ ಜಾತಿ ಜಾತಿಗಳ ಮಧ್ಯೆ ವೈಷಮ್ಯ ಹುಟ್ಟುವಂತೆ ಮಾಡಿರುತ್ತಾರೆ. ಆದ್ದರಿಂದ ‘ಒಂದು ವಾಣಿ’ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.