ದಾವಣಗೆರೆ: ಬೈಕ್ಗೆ ಗುದ್ದಿ, ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಇಲ್ಲಿನ 1ನೇ ಜೆಎಂಎಫ್ಸಿ ನ್ಯಾಯಾಲಯ ಶುಕ್ರವಾರ ಶಿಕ್ಷೆ ವಿಧಿಸಿದೆ.
2013ರ ಅಕ್ಟೋಬರ್ 15ರಂದು ಶಾಮನೂರು ರಸ್ತೆಯ ಲಕ್ಷ್ಮಿ ಫ್ಲೋರ್ಮಿಲ್ ಬಳಿ ಬೈಕ್ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರಳಹಳ್ಳಿಸಿದ್ದಪ್ಪ (65) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಲಾರಿ ಚಾಲಕ, ದಾರವಾಢ ಜಿಲ್ಲೆ ಮಲಗವಾಡ ಗ್ರಾಮದ ಬಸವರಾಜ ಎಸ್. ತಡಹಾಳ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್. ಯತೀಶ್, ಆರೋಪಿಗೆ ಐಪಿಸಿ ಕಲಂ 279 ಪ್ರಕಾರ ₹ 1,000 ದಂಡ, ದಂಡ ಪಾವತಿಸದಿದ್ದರೆ 1 ತಿಂಗಳು ಶಿಕ್ಷೆ ಹಾಗೂ ಕಲಂ 304 (ಎ) ಅಡಿ 1 ವರ್ಷ ಕಾರಾಗೃಹ ವಾಸ ಹಾಗೂ ₹ 10 ಸಾವಿರ ರೂ ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ಹೆಚ್ಚುವರಿ 3 ತಿಂಗಳು ಜೈಲು ಶಿಕ್ಷೆ ನೀಡಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ ₹ 8 ಸಾವಿರ ಪರಿಹಾರವನ್ನು ನೊಂದವರ ಕುಟುಂಬಕ್ಕೆ ಹಾಗೂ ₹ 2,000 ಸರ್ಕಾರಕ್ಕೆ ಪಾವತಿಸುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎ.ಎಂ. ಬಸವರಾಜ್ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.