ADVERTISEMENT

ಅಡುಗೆ ಮಾಡಿ, ಸಿಲಿಂಡರ್‌ ಹೊತ್ತು ಪ್ರತಿಭಟನೆ

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ದಿನಬಳಕೆ ವಸ್ತು ಬೆಲೆ ಏರಿಕೆ ಖಂಡಿಸಿದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 3:47 IST
Last Updated 1 ಮಾರ್ಚ್ 2021, 3:47 IST
ಹೆಚ್ಚುತ್ತಿರುವ ಅಡುಗೆ ಅನಿಲ ಹಾಗೂ ತೈಲ ಬೆಲೆ ಖಂಡಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹಳೇ ದಾವಣಗೆರೆಯ ದುರ್ಗಾಂಬಾ ದೇವಸ್ಥಾನದ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಹೆಚ್ಚುತ್ತಿರುವ ಅಡುಗೆ ಅನಿಲ ಹಾಗೂ ತೈಲ ಬೆಲೆ ಖಂಡಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹಳೇ ದಾವಣಗೆರೆಯ ದುರ್ಗಾಂಬಾ ದೇವಸ್ಥಾನದ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ದಾವಣಗೆರೆ: ಅಡುಗೆ ಅನಿಲದ ಸಿಲಿಂಡರ್‌ ಹೊತ್ತುಕೊಂಡು ಮರವಣಿಗೆ ಮಾಡಿ, ಸಾಂಕೇತಿಕವಾಗಿ ಒಲೆಯಲ್ಲಿ ಅಡುಗೆ ಮಾಡಿ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್‌ ದಕ್ಷಿಣ ವಲಯ ಸಮಿತಿಯು ಹೊಂಡದ ಸರ್ಕಲ್‌ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ವೀರ ಮದಕರಿನಾಯಕ ಪುತ್ಥಳಿಗೆ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಮಾಲಾರ್ಪಣೆ ಮಾಡಿ ‍ಪ್ರತಿಭಟನೆಗೆ ಚಾಲನೆ ನೀಡಿದರು. ದುರ್ಗಾಂಬಿಕಾ ದೇವಸ್ಥಾನದ ಬಳಿ ತೆರಳಿ, ಪಾಲಿಕೆ ಸದಸ್ಯ ಜಿ.ಡಿ. ಪ್ರಕಾಶ್ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ. ಚಮನ್‌ಸಾಬ್‌ ನೇತೃತ್ವದಲ್ಲಿ ದರ್ಗಾದಲ್ಲಿ ಪ್ರಾರ್ಥನೆ ಮಾಡಲಾಯಿತು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಬಾಯಿ ಮಹಾಂತೇಶ್ ಅವರ ನೇತೃತ್ವದಲ್ಲಿ ಶಿವಾಜಿ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಕಾರ್ಯಕರ್ತರು ಸಿಲೆಂಡರ್‌ ಅನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದರು.

ಜಿ.ಡಿ ಪ್ರಕಾಶ್ ಮಾತನಾಡಿ, ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸಗಳನ್ನೇ ಮಾಡಿಕೊಂಡು ಬಂದಿದೆ. ದಿನೇ ದಿನೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಸುವ ಮೂಲಕ ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ’ ಎಂದು ಟೀಕಿಸಿದರು.

ADVERTISEMENT

ಅಯೂಬ್ ಫೈಲ್ವಾನ್, ‘ದಾವಣಗೆರೆ ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಯಿಂದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಆದರೆ ಅವರು ಏಳ್ಳಿನಷ್ಟೂ ಕೆಲಸ ಮಾಡಿಲ್ಲ. ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಈ ನಗರವನ್ನು ಅಭಿವೃದ್ಧಿ ಪಡೆಸಿದ್ದಾರೆ’ ಎಂದು ಹೇಳಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕೇಂದ್ರ ಸರ್ಕಾರವೂ ತೈಲ ಮತ್ತು ಸಿಲೆಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರಿಗೆ ಬಿಸಿ ತಟ್ಟದೆ. ಜನರು ಬಿಜೆಪಿಗೆ ಮತ ನೀಡಿ ಪಶ್ಚಾತಾಪ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮೋದಿ ಜನರ ಪರ ನಿಲ್ಲುವ ಬದಲು ಶ್ರೀಮಂತರ ಪರ ನಿಂತಿದ್ದಾರೆ. ಬಿಜೆಪಿಯ ಜನವಿರೋಧಿ ನೀತಿ ಖಂಡಿಸಿ, ಜನರನ್ನು ಜಾಗೃತ ಮಾಡುವ ನಿಟ್ಟಿನಲ್ಲಿ ಪಾಲಿಕೆಯ 45 ವಾರ್ಡ್‍ಗಳಲ್ಲೂ ಕೂಡ ಪ್ರತಿಭಟನೆ ನಡೆಸುತ್ತವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯೆ ಸುಧಾ ಇಟ್ಟಿಗುಡಿ ಮಂಜುನಾಥ್, ಮುಖಂಡರಾದ ಗೌಡ್ರು ಚನ್ನಬಸಪ್ಪ, ಎಲ್‍ಎಂಹೆಚ್ ಸಾಗರ್, ಡೋಲಿ ಚಂದ್ರು, ಮುಜಾಯಿದ್ಧಿನ್, ಸೈಯದ್ ಚಾರ್ಲಿ, ದ್ರಾಕ್ಷಾಯಣಮ್ಮ, ಎಲ್‌.ಎಚ್‌. ಸಾಗರ್‌,ಇರ್ಫಾನ್, ವಾಜೀದ್, ಖಾಜಾ, ಹಬೀಬ್, ಜಾಕಿರ್ ಹುಸೇನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.