ADVERTISEMENT

ಮೂರು ಮಂದಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 14:03 IST
Last Updated 18 ಜೂನ್ 2020, 14:03 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸಹಿತ ಮೂವರಿಗೆ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜಸ್ಥಾನದಿಂದ ಹಿಂತಿರುಗಿರುವ ಆಂಜನೇಯ ಬಡಾವಣೆಯ 25 ವರ್ಷದ ಮಹಿಳೆಯಲ್ಲಿ (ಪಿ.7803) ಸೋಂಕು ಇರುವುದು ಪತ್ತೆಯಾಗಿದೆ.

ದಾವಣಗೆರೆ ತಾಲ್ಲೂಕು ಶ್ಯಾಗಲೆ ಗ್ರಾಮದ 30 ವರ್ಷದ ಯುವಕನಿಗೆ (ಪಿ.7804) ಸೋಂಕು ಇರುವುದು ಖಚಿತವಾಗಿದೆ. ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿಯ 32 ವರ್ಷದ ಮಹಿಳೆಯಲ್ಲೂ (ಪಿ.7805) ಸೋಂಕು ಕಾಣಿಸಿಕೊಂಡಿದೆ. ಈ ಎರಡೂ ಪ್ರಕರಣಗಳನ್ನು ಶೀತಜ್ವರ (ಐಎಲ್‌ಐ) ಎಂದು ಗುರುತಿಸಲಾಗಿದೆ. ಯಾರ ಸಂಪರ್ಕದಿಂದ ಕೊರೊನಾ ಬಂದಿದೆ ಎಂಬುದು ಪತ್ತೆಯಾಗಿಲ್ಲ.

ADVERTISEMENT

ಹೊನ್ನಾಳಿ ತಾಲ್ಲೂಕಿನ ಮಾದೇನಹಳ್ಳಿ, ಚನ್ನಗಿರಿ ತಾಲ್ಲೂಕಿನ ಕೆರೆಬೆಳಚಿ, ಬಸವಾಪಟ್ಟಣ ಹೀಗೆ ಹಿಂದೆಯೂ ಗ್ರಾಮಾಂತರ ಪ್ರದೇಶದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತಾದರೂ ಅವರೆಲ್ಲರೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದರು, ಕ್ವಾರಂಟೈನ್‌ನಲ್ಲಿ ಇದ್ದವರು ಆಗಿದ್ದರು. ಆದರೆ ಈ ಬಾರಿ ಶ್ಯಾಗಲೆ ಮತ್ತು ಬಸವನಹಳ್ಳಿಯಲ್ಲಿ ಊರಲ್ಲೇ ಇದ್ದ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದುವೇ ಆತಂಕಕ್ಕೆ ಕಾರಣವಾಗಿದೆ.

ಗುರುವಾರ 8 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 233 ಸೋಂಕಿತ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ 215 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ 12 ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.