ADVERTISEMENT

ದಾವಣಗೆರೆ: 400 ದಾಟಿದ ಕೊರೊನಾ ಸೋಂಕಿತರು

93 ವರ್ಷದ ವೃದ್ಧೆ ಸೇರಿ 65 ಹಿರಿಯರು, ಒಂದು ವರ್ಷದ ಮಗು ಸೇರಿ 8 ಮಕ್ಕಳು ಗುಣಮುಖ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 3:07 IST
Last Updated 6 ಸೆಪ್ಟೆಂಬರ್ 2020, 3:07 IST
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೀಲ್‍ಡೌನ್ ಮಾಡಿದರು
ಸಾಸ್ವೆಹಳ್ಳಿ ಸಮೀಪದ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೀಲ್‍ಡೌನ್ ಮಾಡಿದರು   

ದಾವಣಗೆರೆ: ಜಿಲ್ಲೆಯಲ್ಲಿ 406 ಮಂದಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ. ಏಳು ಮಂದಿ ಮೃತಪಟ್ಟಿದ್ದಾರೆ.

ಅಂಜನೇಯ ಮಿಲ್‌ ಕ್ವಾರ್ಟರ್ಸ್‌ನ 68 ವರ್ಷದ ವೃದ್ಧೆ, ನ್ಯಾಮತಿಯ 65 ವರ್ಷದ ವೃದ್ಧ, ವಿನೋಬನಗರದ 66 ವರ್ಷದ ವೃದ್ಧೆ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡದಿಂದ ಮೃತಪಟ್ಟರು. ಬೂದಿಹಾಳ್‌ನ 34 ವರ್ಷದ ಯುವಕ ಮತ್ತು ಹರಪಹಳ್ಳಿ ತಾಲ್ಲೂಕು ಪುಣಬಘಟ್ಟದ 35 ವರ್ಷದ ಯುವಕ ಉಸಿರಾಟದ ಸಮಸ್ಯೆಯಿಂದ ನಿಧನರಾದರು. ಜಗಳೂರು ಬಿದರಕೆರೆಯ 60 ವರ್ಷದ ವೃದ್ಧ ಮತ್ತು ದಾವಣಗೆರೆ ಕೆ.ಬಿ. ಬಡಾವಣೆಯ 83 ವರ್ಷದ ಮಹಿಳೆ ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದ ಮೃತಪಟ್ಟರು.

90 ವರ್ಷದವರು ಸೇರಿ 55 ವೃದ್ಧರಿಗೆ 38 ವೃದ್ಧೆಯರಿಗೆ ಕೊರೊನಾ ಬಂದಿದೆ. ತಲಾ ಒಂದು ವರ್ಷದ ಇಬ್ಬರು ಹೆಣ್ಣು ಶಿಶುಗಳು ಸೇರಿ 20 ಬಾಲಕಿಯರು, 12 ಬಾಲಕರಿಗೆ ಸೋಂಕು ತಗುಲಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನಲ್ಲಿ 152 ಮಂದಿಗೆ ಕೊರೊನಾ ಬಂದಿದೆ. ಚಿಕ್ಕಬೂದಿಹಾಳ್‌, ಹೂವಿನಮಡು, ಕುರ್ಕಿ, ಕೊಂಡಜ್ಜಿ, ಕಲ್ಕೆರೆ, ಹೊನ್ನಮರಡಿ, ಮಂಡಲೂರು, ಹೊನ್ನನಾಯಕನಹಳ್ಳಿ, ಬಸಾಪುರ, ತುರ್ಚಘಟ್ಟ ಮುಂತಾದ ಹಳ್ಳಿ ಪ್ರದೇಶಗಳಲ್ಲಿ 15 ಮಂದಿಗೆ ಸೋಂಕು ಬಂದಿದೆ. ಉಳಿದ 137 ಮಂದಿ ಮಹಾನಗರ ಪಾಲಿಕೆ ವ್ಯಾಪ್ತಿಯವರು ಆಗಿದ್ದಾರೆ. ನಿಟುವಳ್ಳಿ, ವಿದ್ಯಾನಗರ, ವಿನೋಬನಗರ, ಎಸ್‌ಎಸ್ ಬಡಾವಣೆ, ತರಳಬಾಳು ಬಡಾವಣೆ, ಆಂಜನೇಯ ಬಡಾವಣೆ, ಎಂಸಿಸಿ ಬಿ ಬ್ಲಾಕ್‌ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

ಜೆಜೆಎಂ ಕಾಲೇಜು, ಪೊಲೀಸ್‌ ಕ್ವಾರ್ಟರ್ಸ್‌, ಜಿಎಂಎಸ್‌ ಸ್ಟಾಫ್‌, ಸಿಜಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿ, ಡೆಂಟಲ್‌ ಕಾಲೇಜು ಆರೈಕೆ, ಎಸ್‌ಎಸ್‌ಐಎಂನ ಸಿಬ್ಬಂದಿಗೂ ಸೋಂಕು ತಗುಲಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಶತಕ(116) ದಾಟಿದೆ. ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 52, ಹರಿಹರ ತಾಲ್ಲೂಕಿನಲ್ಲಿ 33, ಜಗಳೂರು ತಾಲ್ಲೂಕಿನಲ್ಲಿ 26 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ.

ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಣೆಬೆನ್ನೂರಿನ 8 ಮಂದಿ, ಚಿತ್ರದುರ್ಗ, ರಟ್ಟಿಹಳ್ಳಿಯ ತಲಾ ಮೂವರು, ಹರಪನಹಳ್ಳಿ, ಹಿರೇಕೆರೂರಿನ ತಲಾ ಇಬ್ಬರು, ಹಿರಿಯೂರು, ಹೊಸದುರ್ಗ, ಮೊಳಕಾಲ್ಮುರು, ಹೊಳಲ್ಕೆರೆ, ಸವಣೂರು, ಬ್ಯಾಡಗಿ, ಕೊಟ್ಟೂರು, ಬ್ಯಾಡಗಿ, ಕಡೂರಿನ ತಲಾ ಒಬ್ಬರು ಹೀಗೆ ಜಿಲ್ಲೆಯ ಹೊರಗಿನ ಒಟ್ಟು 27 ಮಂದಿಯಲ್ಲಿ ಕೊರೊನಾ ಇರುವುದು ಖಚಿತವಾಗಿದೆ.

238 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 93 ವರ್ಷದ ಒಬ್ಬರೂ ಸೇರಿ 21 ವೃದ್ಧೆಯರು, 44 ವೃದ್ಧರು, ಒಂದು ವರ್ಷದ ಮಗು ಸೇರಿ ಐವರು ಬಾಲಕಿಯರು, ಮೂವರು ಬಾಲಕರೂ ಬಿಡುಗಡೆಯಾದವರಲ್ಲಿ ಇದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,977 ಮಂದಿಗೆ ಕೊರೊನಾ ಬಂದಿದೆ. 7986 ಮಂದಿ ಗುಣಮುಖರಾಗಿದ್ದಾರೆ. 213 ಮಂದಿ ಮೃತಪಟ್ಟಿದ್ದಾರೆ. 2778 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.