ದಾವಣಗೆರೆ: ಜಿಲ್ಲೆಯಲ್ಲಿ 272 ಮಂದಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ. ಕೋವಿಡ್–19 ರೋಗದಿಂದ ಐವರು ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿನಿಂದ ಮುಕ್ತರಾಗಿ ಶನಿವಾರ 349 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು 4,737 ಮಂದಿ ಕೋವಿಡ್ ರೋಗದಿಂದ ಗುಣಮುಖರಾದಂತಾಗಿದೆ.ಶನಿವಾರ ಖಚಿತಪಟ್ಟ 272 ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 6,779 ಪ್ರಕರಣಗಳು ಪತ್ತೆಯಾಗಿವೆ. ಸದ್ಯ 1,889 ಸಕ್ರಿಯ ಪ್ರಕರಣಗಳಿವೆ.
ಈ ದಿನ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ 198 ಜನರಿಗೆ ಹಾಗೂ ಆರ್.ಎ.ಟಿ. ಪರೀಕ್ಷೆಯಲ್ಲಿ 74 ಮಂದಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 159 ಜನ, ಹರಿಹರ ತಾಲ್ಲೂಕಿನಲ್ಲಿ 35 ಮಂದಿ, ಜಗಳೂರು ತಾಲ್ಲೂಕಿನಲ್ಲಿ ನಾಲ್ವರು, ಚನ್ನಗಿರಿ ತಾಲ್ಲೂಕಿನಲ್ಲಿ 27 ಮಂದಿ, ಹೊನ್ನಾಳಿ ತಾಲ್ಲೂಕಿನಲ್ಲಿ 34 ಜನ ಹಾಗೂ ಬೇರೆ ಜಿಲ್ಲೆಗಳ 13 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಮೃತರ ವಿವರ: ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ 49 ವರ್ಷದ ಮಹಿಳೆ ಹಾಗೂ 63 ವರ್ಷದ ವೃದ್ಧೆ ಮತ್ತು 55 ವರ್ಷದ ಪುರುಷ ಶುಕ್ರವಾರ ಮೃತಪಟ್ಟಿದ್ದು, ಇವರಲ್ಲಿ ಸೋಂಕು ಇರುವುದು ಶನಿವಾರ ಖಚಿತವಾಗಿದೆ. ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 78 ವರ್ಷದ ವೃದ್ಧೆ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಣೆಬೆನ್ನೂರಿನ 56 ವರ್ಷದ ಪುರುಷ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಇವರಲ್ಲೂ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.