ದಾವಣಗೆರೆ: ಜಿಲ್ಲೆಯಲ್ಲಿ 133 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ. ನಾಲ್ವರು ಮೃತಪಟ್ಟಿದ್ದಾರೆ.
322 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕೊರೊನಾ ಬಂದವರ ಒಟ್ಟು ಸಂಖ್ಯೆ 15,167ಕ್ಕೆ ತಲುಪಿದೆ. 12,094 ಮಂದಿ ಗುಣಮುಖರಾಗಿದ್ದಾರೆ. 238 ಮಂದಿ ಮೃತಪಟ್ಟಿದ್ದಾರೆ. 2,835 ಸಕ್ರಿಯ ಪ್ರಕರಣಗಳಿವೆ.
ಮುಷ್ಕರದಿಂದ ಜನರಿಗೆ ತೊಂದರೆ: ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಆರೋಗ್ಯ ಮಿಷನ್ನಡಿ ಬರುವ ಆರೋಗ್ಯ ಸಿಬ್ಬಂದಿ ಮುಷ್ಕರ ಮುಂದುವರಿಸಿರು ವುದರಿಂದ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಲ್ಯಾಬ್ ಟೆಕ್ನೀಷಿಯನ್ಸ್, ಫಾರ್ಮ ಸಿಸ್ಟ್ಸ್, ಸ್ಟಾಫ್ ನರ್ಸ್, ಆರೋಗ್ಯ ಕಾರ್ಯಕರ್ತರು, ಕಂಪ್ಯೂಟರ್ ಆಪರೇಟರ್ಸ್ ಹೀಗೆ ವಿವಿಧ ವಿಭಾಗ ಗಳಲ್ಲಿ ಎನ್ಎಚ್ಎಂ ಅಡಿಯಲ್ಲಿ ಕಾರ್ಯನಿರ್ವಹಿಸುವ 438 ಮಂದಿ, ಹೊರಗುತ್ತಿಗೆಯಲ್ಲಿ 108 ಮಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಹಾಗಾಗಿ ಗುರುವಾರವೂ ಕೊರೊನಾ ಬುಲೆಟಿನ್ ನೀಡಲು ಜಿಲ್ಲಾಡಳಿತ ವಿಫಲವಾಗಿದೆ.
ಕೊರೊನಾ ಸೋಂಕು ಪತ್ತೆಗಾಗಿ ಗಂಟಲುದ್ರವ ಪರೀಕ್ಷೆ ನಡೆಸುವಲ್ಲಿ, ಹೊರರೋಗಿ ವಿಭಾಗದಲ್ಲಿ, ತುರ್ತು ನಿಗಾ ಘಟಕದಲ್ಲಿ ಜನರು ಕಾಯುವಂತಾಯಿತು.
‘ಸಿಜಿ ಆಸ್ಪತ್ರೆಯಲ್ಲಿ ಉಳಿದ ಸಿಬ್ಬಂದಿ ಜತೆಗೆ ಆರೋಗ್ಯ ಕಾರ್ಯ ನಿರ್ವಹಣೆ ಮಾಡಲಾಗಿದೆ. ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿದ್ದೇವೆ’ ಎಂದು ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
11 ಮಂದಿಗೆ ಕೋವಿಡ್ ದೃಢ
ಮಲೇಬೆನ್ನೂರು: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ 11 ಜನರಿಗೆ ಕೋವಿಡ್ ದೃಢಪಟ್ಟಿದೆ.
ಪಟ್ಟಣದ ಖಾಸಗಿ ವೈದ್ಯ, ನಂದಿಗುಡಿಯಲ್ಲಿ ಪುರುಷ, ಮಹಿಳೆ, ಹಿರೆ ಹಾಲಿವಾಣ ಹಿಂಡಸಗಟ್ಟೆಯಲ್ಲಿ ತಲಾ ಒಬ್ಬ ಮಹಿಳೆಯರು, ಧೂಳೆ ಹೊಳೆಯ ವೃದ್ಧರು, ಕಾಮಲಾಪುರ, ಕೊಕ್ಕನೂರು, ಹೊಳೆಸಿರಿಗೆರೆ, ಕುಂಬಳೂರಿನ ತಲಾ ಒಬ್ಬ ಪುರುಷರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.
ದಂಡ ವಸೂಲಿ: ಪಟ್ಟಣದ ವಾರದ ಸಂತೆಯಲ್ಲಿ ಮಾಸ್ಕ್ ಧರಿಸಿದೆ ವ್ಯವಹರಿಸುತ್ತಿದ್ದ 38 ವ್ಯಾಪಾರಿಗಳಿಗೆ ಪುರಸಭೆ ಸಿಬ್ಬಂದಿ ದಂಡ ವಿಧಿಸಿದ್ದಾರೆ. ₹ 3,800 ದಂಡ ವಸೂಲು ಮಾಡಲಾಗಿದೆ ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಗುರುಪ್ರಸಾದ್ ಮಾಹಿತಿ
ನೀಡಿದರು.
ಪಾಸ್ಟಿಕ್ ಕವರ್ ಬಳಸುತ್ತಿದ್ದವರಿಂದ ಕವರುಗಳನ್ನು ವಶಪಡಿಸಿಕೊಂಡಿದ್ದಾರೆ. ಎಎಸ್ಐ ಹನುಮಂತಪ್ಪ, ಬಸವರಾಜಪ್ಪ ನೇತೃತ್ವದಲ್ಲಿ ಪಟ್ಟಣದ ನಾಲ್ಕು ಕಡೆ ಮಾಸ್ಕ್ ಧರಿಸಿದೆ ವಾಹನ ಚಲಾಯಿಸುತ್ತಿದ್ದವರಿಂದ ದಂಡ ವಸೂಲಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.