ADVERTISEMENT

ಸಂಘ ಪರಿವಾರದವರು ಅಸ್ಪೃಷ್ಯತೆ ವಿರುದ್ಧ ಮಾತನಾಡಲಿ: ಕದಸಂಸ ಮುಖಂಡ ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:20 IST
Last Updated 23 ಫೆಬ್ರುವರಿ 2026, 6:20 IST
ಡಿ.ಹನುಮಂತಪ್ಪ
ಡಿ.ಹನುಮಂತಪ್ಪ   

ಹರಿಹರ: ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರು ಗ್ರಾಮದ ಆದಿಶಕ್ತಿ ಅರಸಮ್ಮ ದೇವಾಲಯ ಪ್ರವೇಶಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ನವ ದಂಪತಿಯನ್ನು ಹೊರಗೆ ಕಳಿಸಿದ ಘಟನೆಯನ್ನು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಡಿ.ಹನುಂಮತಪ್ಪ ಖಂಡಿಸಿದ್ದಾರೆ.

ಗೋಣಿ ತುಮಕೂರು ಗ್ರಾಮದಂತೆಯೇ ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಈಗಲೂ ಅಮಾನವೀಯ ಅಸ್ಪೃಷ್ಯತೆ ಜಾರಿಯಲ್ಲಿದೆ. ಕ್ಷೌರ ಮಾಡಿಸಲು, ಹೋಟೆಲ್, ದೇವಸ್ಥಾನ ಪ್ರವೇಶಿಸಲು ಈಗಲೂ ಬಿಡದಿರುವುದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹಿಂದೂಗಳೆಲ್ಲಾ ಒಂದು ಎಂದು ವೀರಾವೇಷದಿಂದ ಮಾತನಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಮುಖಂಡರು ಈ ಪ್ರಕರಣದ ಕುರಿತು ಮಾತನಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

‘ಕಲ್ಲಡ್ಕ ಪ್ರಭಾಕರ ಭಟ್, ಪ್ರತಾಪ್ ಸಿಂಹ, ಸಿ.ಟಿ.ರವಿ ಸೇರಿದಂತೆ ರಾಜ್ಯದಲ್ಲಿ ಹಿಂದೂ ಸಮುದಾಯದ ರಕ್ಷಕರಂತೆ ಬಿಂಬಿಸಿಕೊಂಡಿರುವ ಸಂಘ ಪರಿವಾರದ ಮುಖಂಡರು ಕೂಡಲೇ ಗೋಣಿ ತುಮಕೂರು ಗ್ರಾಮಕ್ಕೆ ಭೇಟಿ ನೀಡಬೇಕು. ಹಿಂದೂಗಳೆಲ್ಲರೂ ಒಂದು ಎಂಬುದನ್ನು ಸವರ್ಣೀಯರಿಗೆ ಮನವರಿಕೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ವಿವಿಧ ಧರ್ಮೀಯರ ನಡುವೆ ಕಲಹ ಉಂಟುಮಾಡಲು, ಪೊಲೀಸರ ಗುಂಡಿಗೆ ಎದೆ ಕೊಡಲು ಮಾತ್ರ ದಲಿತ, ಹಿಂದುಳಿದ ಸಮುದಾಯಗಳ ಸದಸ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಎಷ್ಟೋ ಕಡೆಗಳಲ್ಲಿ ಸಮಾನತೆ, ಬದುಕುವ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂಬುದನ್ನು ಅವರು ಅರಿಯಬೇಕಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.