ದಾವಣಗೆರೆ: ನಗರದ ದವನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ನ ವಿದ್ಯಾರ್ಥಿಗಳು ಏಪ್ರಿಲ್ 4ರಂದು ನಡೆಯಲಿರುವ ‘ಸ್ಫೂರ್ತಿ ಯುವ ಉತ್ಸವ’ ಅಂಗವಾಗಿ ಬೀದಿ ನಾಟಕಗಳನ್ನು ಪ್ರದರ್ಶಿಸಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆಯುತ್ತಿದ್ದಾರೆ.
‘ಸ್ಫೂರ್ತಿ ಯುವ ಉತ್ಸವ’ದ ಹಿನ್ನೆಯಲ್ಲಿ ‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ’ ತತ್ವದಡಿ ಕಾಲೇಜಿನ ಬಿ.ಕಾಂ, ಬಿ.ಬಿ.ಎಂ, ಬಿ.ಸಿ.ಎ ಮತ್ತು ಎಂ.ಕಾಂ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸುತ್ತಿದ್ದಾರೆ. 10 ತಂಡಗಳನ್ನು ರಚಿಸಲಾಗಿದ್ದು, ಸಾಮಾಜಿಕ ಕಳಕಳಿಯ ವಿಷಯವನ್ನು ಆಯ್ಕೆ ಮಾಡಿಕೊಂಡು, ಅದರ ಕಾರಣ, ಸಮಸ್ಯೆ ಮತ್ತು ನಿವಾರಣೆ ಹೇಗೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ ಕಿರು ನಾಟಕ ತಯಾರಿಸಿದ್ದಾರೆ. ಅದನ್ನು ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ.
ಸೋಮವಾರ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ‘ಸೆಲ್ಕೊಹಾಲಿಕ್’ ಬೀದಿ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ನಾಟಕದ ಮೂಲಕ ಜನರ ಕಣ್ತೆರೆಸಿದರು.
ದವನ್ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ‘ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಭೂಮಿಯನ್ನು ರಕ್ಷಿಸಿ’ ಎಂಬ ವಿಷಯಾಧಾರಿತ ಬೀದಿ ನಾಟಕವನ್ನು ಮಾರ್ಚ್ 26ರಂದು ಮಧ್ಯಾಹ್ನ 12ಕ್ಕೆ ಯುಬಿಡಿಟಿ ಕಾಲೇಜಿನ ಆವರಣದಲ್ಲಿ ಪ್ರದರ್ಶಿಸಲಿದ್ದಾರೆ.
ಸಾಕ್ಷರತೆ ಹೆಚ್ಚಿಸುವ ಕುರಿತು ಧವನ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾ. 26ರಂದು ಬೆಳಿಗ್ಗೆ 9ಕ್ಕೆ ಡಿ.ಆರ್.ಎಂ. ಕಾಲೇಜಿನಲ್ಲಿ ‘ನುಕ್ಕಡ್’ ಬೀದಿ ನಾಟಕವನ್ನು ಪ್ರದರ್ಶಿಸಲಿದ್ದಾರೆ.
ವಿದ್ಯಾರ್ಥಿಗಳು ವಿವಿಧೆಡೆ ಪ್ರದರ್ಶಿಸುವ ಬೀದಿ ನಾಟಕದ ದೃಶ್ಯಗಳನ್ನು ಸಂಗ್ರಹಿಸಿ ‘ಸ್ಫೂರ್ತಿ ಯುವ ಉತ್ಸವ’ದಲ್ಲಿ ಪಿಪಿಟಿ ಮೂಲಕ ತೋರಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.