ದಾವಣಗೆರೆಯ ಮಟ್ಟಿಕಲ್ ಬಳಿ ಹಿಂದೂ ಸುರಕ್ಷಾ ಸಮಿತಿ ದಾವಣಗೆರೆ ಆಯೋಜಿಸಿದ್ದ ಹಿಂದೂಗಳ ಮೇಲಿನ ದೌರ್ಜನ್ಯ ವಿರೋಧಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದ ಹಿಂದೂ ಮುಖಂಡರು ಹಾಗೂ ನಾಗರಿಕರು –ಪ್ರಜಾವಾಣಿ ಚಿತ್ರ
ದಾವಣಗೆರೆ: ಹಿಂದೂ ವಿರೋಧಿಗಳ ಜೊತೆಗಿನ ಆರ್ಥಿಕ ವ್ಯವಹಾರ ಕಡಿಮೆ ಮಾಡಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಿಂದೂಗಳ ಮೇಲಿನ ದಾಳಿಯನ್ನು ತಡೆಯಲು ಆರ್ಥಿಕ ಪಾರಮ್ಯವೇ ಅಸ್ತ್ರವಾಗಲಿ ಎಂದು ಉಪನ್ಯಾಸಕ ಆದರ್ಶ ಗೋಖಲೆ ಸಲಹೆ ನೀಡಿದರು.
ಕಾರ್ಲ್ ಮಾರ್ಕ್ಸ್ ನಗರದಲ್ಲಿ ನಡೆದ ಗುಂಪು ಘರ್ಷಣೆಯನ್ನು ವಿರೋಧಿಸಿ ಇಲ್ಲಿನ ಬಂಬೂಬಜಾರಿನಲ್ಲಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ದಿಗ್ಬಂಧನ ಹೇರಿದ್ದರಿಂದ ಭಾರತ–ಪಾಕಿಸ್ತಾನದ ನಡುವಿನ ವ್ಯವಹಾರ ಸ್ಥಗಿತಗೊಂಡಿದೆ. ಇದರಿಂದ ಪಾಕಿಸ್ತಾನಕ್ಕೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬಿದ್ದಿದೆ. ಇದೇ ಮಾದರಿಯನ್ನು ದಾವಣಗೆರೆಯಲ್ಲಿಯೂ ಪಾಲನೆ ಮಾಡಬೇಕಿದೆ. ಹಿಂದೂಗಳ ಜೊತೆಗಷ್ಟೇ ಆರ್ಥಿಕ ವ್ಯವಹಾರ ನಡೆಸಬೇಕಿದೆ’ ಎಂದು ಹೇಳಿದರು.
‘ಸಂಸ್ಕೃತದ ಚಿಂತನೆಗಳನ್ನು ವಿಶ್ವಕ್ಕೆ ಪಸರಿಸಿದ ಪಂಡಿತರನ್ನು ಕಾಶ್ಮೀರದಿಂದ ಹೊರಹಾಕಲಾಗಿದೆ. ದುರ್ಗಾ ಮಾತೆ ಆರಾಧನೆಗೆ ಪಶ್ಚಿಮ ಬಂಗಾಳದಲ್ಲಿ ಅನುಮತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಗಣೇಶಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಕರ್ನಾಟಕದಲ್ಲಿಯೂ ಅನುಮತಿ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕವು ಮತ್ತೊಂದು ಕಾಶ್ಮೀರ ಅಥವಾ ಪಶ್ಚಿಮ ಬಂಗಾಳವಾಗುವ ದಿನಗಳು ದೂರವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
‘ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ.
ಮುಸ್ಲಿಂ ಮಹಿಳೆಯಿಂದ ದಸರಾ ಉದ್ಘಾಟಿಸಲು ಅವಕಾಶ ಕಲ್ಪಿಸಿ ಹಿಂದೂಗಳ ಭಾವನೆಗೆ ಸರ್ಕಾರವೇ ಧಕ್ಕೆಯುಂಟು ಮಾಡಿದೆ’ ಎಂದು ಆರೋಪಿಸಿದರು.
‘ಮಾರಕಾಸ್ತ್ರ ಹಿಡಿದು ಸಮಾಜದಲ್ಲಿ ಭೀತಿ ಸೃಷ್ಟಿಸುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಪೊಲೀಸರು ಮೀನ–ಮೇಷ ಎಣಿಸಿದರು. ಆದರೆ, ವಿಶ್ವ ಹಿಂದೂ ಪರಿಷತ್ ಮುಖಂಡ ಸತೀಶ್ ಪೂಜಾರಿ ಅವರನ್ನು ಗಡಿಪಾರು ಮಾಡಲು ಉತ್ಸುಕರಾಗಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಆಗ್ರಹಿಸಿದರು.
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.