ದಾವಣಗೆರೆ: ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಹೆಸರೇಳಿಕೊಂಡು ವಂಚಕರ ತಂಡವೊಂದು ₹3 ಲಕ್ಷಕ್ಕೂ ಹೆಚ್ಚು ಮೌಲ್ಯದ 77 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದೆ. ಗಣೇಶ ಲೇಔಟ್ನ ನಿವಾಸಿ ಬ್ರಮರಾಂಬ ಎಂಬ ಮಹಿಳೆ ವಂಚನೆಗೊಳಗಾಗಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
‘ಶುಕ್ರವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವಾಗ ರಸ್ತೆಯಲ್ಲಿ ಬಂದ ಅಪರಿಚಿತರು; ನಾವು ಪೊಲೀಸರು ನೀವು ಈ ರೀತಿ ಬಂಗಾರದ ಆಭರಣ ಧರಿಸಿ ಓಡಾಡುವುದು ಸರಿಯಲ್ಲ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ನಿಮ್ಮ ಬಂಗಾರವನ್ನು ನಮಗೆ ನೀಡಿ ಸೀರೆ ಸೆರಗಲ್ಲಿ ಹಾಕುತ್ತೇವೆ ಎಂದು ಹೇಳಿ ಬಂಗಾರ ಪಡೆದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ಮನೆಗೆ ಹೋಗಿ ಸೀರೆ ಸೆರಗನ್ನು ಬಿಚ್ಚಿ ನೋಡಿದಾಗ ಬಂಗಾರದಂತೆ ಕಾಣುವ ಒಂದು ಸರ ಹಾಗೂ ಕಲ್ಲು ಕಂಡಿತು. ಆಗ ನನಗೆ ವಂಚಿಸಿರುವುದು ಗೊತ್ತಾಯಿತು’ ಎಂದು ಅವರು ತಿಳಿಸಿದ್ದಾರೆ.
ವಿದ್ಯಾನಗರದಲ್ಲೂ ವಂಚನೆ: ಇದೇ ರೀತಿಯ ವಂಚನೆ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಶುಕ್ರವಾರ ನಡೆದಿದೆ. ಸಿದ್ದವೀರಪ್ಪ ಬಡಾವಣೆಯ ನಿವಾಸಿ ಚಂದ್ರಕಲಾ ಎಂಬುವರು ವಂಚನೆಗೊಳಗಾದವರು.
‘ಮನೆಯಿಂದ ಬೆಳಿಗ್ಗೆ ಶಾಮನೂರು ರಸ್ತೆಯ ನಂದಿನಿ ಆಸ್ಪತ್ರೆ ಬಳಿ ಹೋಗುತ್ತಿದ್ದಾಗ ಖಾಕಿ ಪ್ಯಾಂಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬಂದು ಕೊರಳಲ್ಲಿ ಮಾಂಗಲ್ಯದ ಸರ ಹಾಕಿಕೊಂಡು ಓಡಾಡಬೇಡಿ’ ಎಂದು ಹೆದರಿಸಿದ. ಬಳಿಕ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪ್ಯಾಕ್ ಮಾಡಿಕೊಡುತ್ತೇನೆ ಎಂದು ಹೇಳಿ ಬಂಗಾರ ಪಡೆದು ವಂಚಿಸಿದ್ದಾನೆ’ ಎಂದು ಮಹಿಳೆ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.