
ಹರಿಹರ: ನಾಡು, ನುಡಿಗಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹೇಳಿದರು.
ಧನ್ಯೋಶ್ಮಿ ಭರತಭೂಮಿ ಸಂಘಟನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸೋಮವಾರ ಸಮೀಪದ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕತ್ತಿದ ಅಮರಶಿಲಾಕ್ಷರ ಶಿಲೆಗಳ ಹಾಗೂ ಧನ್ಯೋಸ್ಮಿ ಭರತಭೂಮಿ ಸಂಸ್ಥೆಯ 10 ವರ್ಷಗಳ ಸಾಧನೆಯ ಕಿರುಹೊತ್ತಗೆ ಲೋಕಾರ್ಪಣೆ ಮಾಡಿ ಮಾತನಾಡಿದರು.
ಯಾವ ಸ್ವಾತಂತ್ರ್ಯ ಹೋರಾಟಗಾರರು ಯಾವ ದಿನಾಂಕದಂದು ಹುತಾತ್ಮರಾದರು ಎಂಬ ಮಾಹಿತಿ ತಿಳಿಸುವ ವಿಶಿಷ್ಟ ಪ್ರಯತ್ನ ಈ ಸಂಸ್ಥೆಗಳಿಂದ ನಡೆದಿದೆ. ಈ ಶಿಲೆಗಳನ್ನು ನೋಡಲು ವಿದ್ಯಾರ್ಥಿಗಳನ್ನು ಕರೆ ತರಬೇಕು. ಆ ಮೂಲಕ ಅವರಲ್ಲಿ ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರ ಮಾಹಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.
ಬ್ರಿಟೀಷರ ಗುಂಡಿಗೆ ಎದೆಕೊಟ್ಟ ಹುತಾತ್ಮರರನ್ನು ಸ್ಮರಿಸುವ ಕಾರ್ಯ ಇದಾಗಿದೆ ಎಂದು ಸಮಾರಂಭ ಉದ್ಘಾಟಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಭಾಷಾ ಅಧ್ಯಯನ ವಿಭಾಗದ ಅಧ್ಯಕ್ಷ ವಿಶ್ವನಾಥ ಎಚ್. ಸಂತಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಸ್ಥಾಪಕ ಅಧ್ಯಕ್ಷ ಜಿ.ಜೆ.ಮೆಹೆಂದಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಂಜುನಾಥ ಮಾತನಾಡಿದರು.
ಪತ್ರಕರ್ತೆ ಡಿ.ಎನ್. ಶಾಂಭವಿ, ಪಿಡಿಒ ದೇವರಾಜ ಜಿ., ಅಮೃತ ವರ್ಷಿಣಿ ವಿದ್ಯಾಲಯದ ಸ್ಥಾಪಕ ಪಿ.ಕೆ. ಪ್ರಕಾಶರಾವ್, ಗ್ರಾಮ ಪಂಚಾಯಿತಿ ಹಾಗೂ ಧನ್ಯೋಸ್ಮಿ ತಂಡದ ಸದಸ್ಯರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.