ADVERTISEMENT

ಹುಳು ಬಿದ್ದ ಸಾಂಬಾರ್; ವಿದ್ಯಾರ್ಥಿಗಳ ದೂರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:28 IST
Last Updated 29 ಜನವರಿ 2026, 6:28 IST
ವಸತಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ವಾರ್ಡನ್‌ ಬಳಿ ವಿವರಿಸುತ್ತಿರುವುದು
ವಸತಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ವಾರ್ಡನ್‌ ಬಳಿ ವಿವರಿಸುತ್ತಿರುವುದು   

ದಾವಣಗೆರೆ: ಹಾಸ್ಟೆಲ್‌ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಬುಧವಾರ ಹುಳು ಬಿದ್ದ ಸಾಂಬಾರ್, ಇಡ್ಲಿ ತಟ್ಟೆಯ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅವರ ಬಳಿ ಅಳಲು ತೋಡಿಕೊಂಡರು. 

ಇಲ್ಲಿನ ಬೂದಾಳ್ ರಸ್ತೆಯ ಎಸ್‌ಪಿಎಸ್ ನಗರದ ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯ(ಡಿ)ದ ವಿದ್ಯಾರ್ಥಿಗಳು, ‘ನಿತ್ಯವೂ ಉಪಾಹಾರ, ಊಟದಲ್ಲಿ ಕೂದಲು, ಸಣ್ಣ ಕಲ್ಲು, ಕಡ್ಡಿಗಳು, ಹುಳು ಪತ್ತೆಯಾಗುತ್ತಿವೆ. ಅಡುಗೆ ಸಿಬ್ಬಂದಿಯಾಗಲೀ, ವಾರ್ಡನ್ ಆಗಲೀ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು. 

‘ಹಾಸ್ಟೆಲ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆಹಾರದಲ್ಲಿ ಯಾವುದೇ ಸತ್ವ ಇರುವುದಿಲ್ಲ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ವಾರ್ಡನ್‌, ಅಡುಗೆ ಸಿಬ್ಬಂದಿ ಬೆದರಿಸುವ ಕೆಲಸ ಮಾಡುತ್ತಾರೆ. ಕಳಪೆ ಆಹಾರದ ಕಾರಣಕ್ಕೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಹೇಳಿದರು. 

ADVERTISEMENT

‘ಹಾಸ್ಟೆಲ್‌ನಲ್ಲಿ ಎಲ್ಲವನ್ನೂ ಸರಿ ಮಾಡಿದ್ದೇವೆ. ಅಡುಗೆ ಸಿಬ್ಬಂದಿಯ ತಪ್ಪಿನಿಂದ ಸಾಂಬಾರ್‌ನಲ್ಲಿ ಹುಳು ಬಿದ್ದಿದೆ. ಒಂದೂವರೆ ತಿಂಗಳ ಹಿಂದೆಯಷ್ಟೇ ವಾರ್ಡನ್ ಆಗಿದ್ದೇನೆ. ಸಿಬ್ಬಂದಿಯನ್ನು ಬದಲಾವಣೆ ಮಾಡಿಲ್ಲವೆಂಬ ಅಸಮಾಧಾನ ವಿದ್ಯಾರ್ಥಿಗಳಲ್ಲಿದೆ. ಉಪ ಲೋಕಾಯುಕ್ತರು ಬಂದಿದ್ದ ವೇಳೆ ತಟ್ಟೆ, ಬೆಡ್ ಶೀಟ್‌ ಕೊಟ್ಟು ಸಹಿ ಪಡೆದಿದ್ದೇವೆ. ನಿತ್ಯವೂ ಹೀಗೆ ಹುಳ ಬರುತ್ತದೆಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಹಾಸ್ಟೆಲ್ ವಾರ್ಡನ್‌ ಹೇಳಿದರು. 

ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಜಿಲ್ಲಾ ಮುಖಂಡ ಸಂಜು ನಾಯ್ಕ, ಎಲ್.ಜಿ.ಆಕಾಶ್, ರವಿ ನಾಯ್ಕ, ಈ.ನವೀನ, ಹನುಮಂತ, ಪ್ರಜ್ವಲ್ ಇತರರು ಇದ್ದರು.

ಹಾಸ್ಟೆಲ್ ವಿದ್ಯಾರ್ಥಿಗಳು ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಶೀಘ್ರವೇ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ಶೀಲವಂತ ಶಿವಕುಮಾರ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.