ADVERTISEMENT

ದಾವಣಗೆರೆ ಜಿಲ್ಲೆ ಕೊರೊನಾ ಮುಕ್ತ ಮಾಡಲು ಸಹಕರಿಸಿ: ಅಜಯ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಮೇ 2020, 13:15 IST
Last Updated 17 ಮೇ 2020, 13:15 IST
ಬಿ.ಜಿ.ಅಜಯ್‌ಕುಮಾರ್
ಬಿ.ಜಿ.ಅಜಯ್‌ಕುಮಾರ್   

ದಾವಣಗೆರೆ: ದಾವಣಗೆರೆಯಲ್ಲಿ ಹಿಂದೂ ಹಾಗೂ ಮುಸ್ಲಿಂರು ಅಣ್ಣ–ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಶಾಂತಿ ಸೌಹಾರ್ದವನ್ನು ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಅಂತಹವರ ವಿರುದ್ಧ ಜಾಗೃತರಾಗಬೇಕಾಗಬೇಕು ಎಂದು ಮೇಯರ್ ಬಿ.ಜಿ. ಅಜಯಕುಮಾರ್ ಸಲಹೆ ನೀಡಿದರು.

‘ದಾವಣಗೆರೆಯನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಕಷ್ಟಪಡುತ್ತಿದ್ದವರ ನಡುವೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಲವು ಮುಸ್ಲಿಮರು ಬಟ್ಟೆ ಖರೀದಿ ಮಾಡುವುದು ಬೇಡ ಎಂದು ಬಂದಿರುವ ವಿಷಯವು ಜನರಲ್ಲಿ ಗೊಂದಲ ಉಂಟು ಮಾಡಿದೆ. ಆದರೆ ವಾಸ್ತವವೇ ಬೇರೆ ಇದೆ. ಹಿಂದೂಗಳು ಯುಗಾದಿಯನ್ನು, ಜೈನರು ಮಹಾವೀರ ಜಯಂತಿಯನ್ನು, ಕ್ರೈಸ್ತರು ಗುಡ್‌ಫ್ರೈಡ್‌ಯನ್ನು ಮನೆಯಲ್ಲೇ ಆಚರಿಸಿದ್ದಾರೆ. ಅಂತೆಯೇ ಮುಸ್ಲಿಮರು ರಂಜಾನ್‌ ಅನ್ನು ಮನೆಯಲ್ಲೇ ಆಚರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ ಹೊಸ ಬಟ್ಟೆ ಖರೀದಿಸುವುದು ಬೇಡ ಎಂದಿದ್ದಾರೆ ಹೊರತು ಬೇರೆನಿಲ್ಲ’ ಎಂದರು.

‘ಹೊಸ ಬಟ್ಟೆ ಖರೀದಿಸುವ ಬದಲು ಅದೇ ಹಣವನ್ನು ಎಲ್ಲ ವರ್ಗದ ಬಡವರ ಕಷ್ಟಕ್ಕೆ ಸ್ಪಂದಿಸಿ ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ನಾನು ಬಿ.ಸಿ. ಉಮಾಪತಿಗೆ ಕೇಳಿದಾಗ ಹೀಗೆ ಹೇಳಿದ್ದಾರೆ. ಆದರೆ ಮುಸ್ಲಿಂ ಮಹಿಳೆಯರು ಬಟ್ಟೆ ಖರೀದಿಸುತ್ತಿರುವ ವಿಡಿಯೊವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸರಿಯಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

1991-1992ರಲ್ಲಿ ದಾವಣಗೆರೆಯಲ್ಲಿ ಧರ್ಮದ ವಿರುದ್ಧ ಕೆಲವೊಂದು ಭಾಗದಲ್ಲಿ ಗಲಾಟೆಯಾಗಿ ಸುಮಾರು ದಿನಗಳ ಕಾಲ ದಾವಣಗೆರೆ ಬಂದ್‌ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಹಿಂದೂ-ಮುಸ್ಲಿಂರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಅಲ್ಲದೇ ಕೇಂದ್ರ ಸರಕಾರ ಆದೇಶಿಸಿದ ಕಾನೂನನ್ನು ಎಲ್ಲ ಧರ್ಮದವರು ಪಾಲಿಸುತ್ತಿದ್ದಾರೆ. ಇನ್ನಾದರೂ ಶಾಂತಿ ಸೌಹಾರ್ದ ಕದಡುವಂತಹ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.

ಪಾಲಿಕೆ ಸದಸ್ಯ ಚಮನ್‌ಸಾಬ್ ಮಾತನಾಡಿ, ‘ದಾವಣಗೆರೆಯಲ್ಲಿ 1.50 ಲಕ್ಷ ಮುಸ್ಲಿಮರು ಇದ್ದು, ಯಾವುದೂ ಮುಸ್ಲಿಮರ ಅಂಗಡಿಗಳು ಇಲ್ಲ. ಕೆಲವರು ಅನವಶ್ಯಕ ಹೇಳಿಕೆಗಳನ್ನು ನೀಡುತ್ತಿದ್ದು, ಅದಕ್ಕೂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಕಿಡಿಗೇಡಿಗಳ ಕೆಲಸಕ್ಕೆ ಆಸ್ಪದ ಕೊಡುವುದು ಬೇಡ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಸಯ್ಯದ್‌ ಚಾರ್ಲಿ ಮಾತನಾಡಿ, ‘ಜಮಾತ್‌ನಲ್ಲಿ ಹೊಸಬಟ್ಟೆ ಖರೀದಿಸಬೇಡಿ. ಅದೇ ಹಣವನ್ನು ಬಡವರ್ಗಕ್ಕೆ ವಿನಿಯೋಗಿಸಿ ಎಂದು ಮುಖಂಡರು ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಇಲ್ಲ. ಇನ್ನು ವಿಡಿಯೊ ಮಾಡಿದವನಿಗೆ ಮುಖಂಡರು ಮುಂದೆ ಈ ರೀತಿ ಮಾಡದಂತೆ ಕಟುವಾಗಿ ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್‌ಮುಖಂಡ ಅಮಾನುಲ್ಲಾ ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.