ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ಅನೈತಿಕ ಸಂಬಂಧಕ್ಕೆ ಸಹಕರಿಸಿದ ಹಾಗೂ ಕೃತ್ಯದಲ್ಲಿ ತೊಡಗಿದ ಆರೋಪದ ಮೇರೆಗೆ ಇಬ್ಬರು ಮಹಿಳೆಯರನ್ನು ಮಸೀದಿಯ ಎದುರು ಅಮಾನುಷವಾಗಿ ಥಳಿಸಿ, ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ ಆರು ಜನರನ್ನು ಚನ್ನಗಿರಿ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಮೊಹಮ್ಮದ್ ನಯಾಜ್, ಮೊಹಮ್ಮದ್ ಗೌಸ್ಪೀರ್, ಚಾಂದ್ಬಾಷಾ, ಇನಾಯತ್ ಉಲ್ಲಾ, ದಸ್ತಗಿರ್ ಹಾಗೂ ಟಿ.ಆರ್.ರಸೂಲ್ ಬಂಧಿತರು. ಘಟನೆಯಲ್ಲಿ ಗಾಯಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಬುಕ್ಕಾಂಬುದಿ ಗ್ರಾಮದ ಶಬೀನಾ ಬಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಮೂಲತಃ ತಾವರೆಕೆರೆಯ ಶಬೀನಾ ಬಾನು ಹಾಗೂ ಜಮೀಲ್ ಅಹಮ್ಮದ್ ಪಕ್ಕದ ಬುಕ್ಕಾಂಬುದಿ ಗ್ರಾಮದಲ್ಲಿ ನೆಲೆಸಿದ್ದಾರೆ. ಏ.7ರಂದು ಶಬೀನಾ ಮನೆಗೆ ಭೇಟಿದ ಮಹಿಳೆಯೊಬ್ಬರು ಅನ್ಯ ಪುರುಷನೊಂದಿಗೆ ಸಲುಗೆಯಿಂದ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಶಬೀನಾ ಪತಿ ಜಮೀಲ್, ತಾವರೆಕೆರೆಯ ಜಾಮೀಯ ಮಸೀದಿಗೆ ಪತ್ನಿ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಸಮುದಾಯದ ಕೆಲ ಮುಖಂಡರು ಏ.9ರಂದು ಜಾಮೀಯಾ ಮಸೀದಿಗೆ ಶಬೀನಾ, ಸಂಬಂಧಿ ಮಹಿಳೆಯನ್ನು ಕರೆಸಿ ಸಾರ್ವಜನಿಕವಾಗಿ ನಿಂದಿಸಿದ್ದಾರೆ. ದೊಣ್ಣೆ, ಪೈಪು, ಕಲ್ಲುಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದನ್ನು ಗಮನಿಸಿದ ಪೊಲೀಸರು ಸಂತ್ರಸ್ತ ಮಹಿಳೆಯರನ್ನು ಪತ್ತೆ ಮಾಡಿ ದೂರು ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.