ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 82 ಶಾಲೆ, 8 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 12 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. 204 ಕಿ.ಮೀ ರಸ್ತೆ ಹಾಳಾಗಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 300 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ ಸೆ.6 ರವರೆಗೆ 395 ಮಿ.ಮೀ ಮಳೆಯಾಗಿದೆ. 44 ಕಿ.ಮೀ ರಾಜ್ಯ ಹೆದ್ದಾರಿ, 44 ಕಿ.ಮೀ ಜಿಲ್ಲಾ ರಸ್ತೆ ಹಾಗೂ 116 ಕಿ.ಮೀ ಗ್ರಾಮೀಣ ರಸ್ತೆಗೆ ಹಾನಿಯಾಗಿದೆ. 2 ಸೇತುವೆ, 882 ವಿದ್ಯುತ್ ಕಂಬ, 43 ವಿದ್ಯುತ್ ಪರಿವರ್ತಕ ಹಾಗೂ 3 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿದೆ’ ಎಂದು ಮಾಹಿತಿ ನೀಡಿದರು.
‘ಜೂನ್ 12 ರಂದು ಸುರಿದ ಭಾರಿ ಮಳೆಗೆ ಹೊನ್ನಾಳಿ ತಾಲ್ಲೂಕಿನ ನೇರಲಗುಂಡಿ ಗ್ರಾಮದಲ್ಲಿ ನೀರು ನುಗ್ಗಿದ್ದರಿಂದ 26 ಕುಂಟುಂಬಗಳಿಗೆ ₹ 65,000 ಪರಿಹಾರ ನೀಡಲಾಗಿದೆ. ಇಲ್ಲಿಯವರೆಗೆ ಸಿಡಿಲು ಬಡಿದು 5 ಹಸುಗಳು ಮೃತಪಟ್ಟಿದ್ದು ₹ 1.87 ಲಕ್ಷ ಪರಿಹಾರ ನೀಡಲಾಗಿದೆ. 30 ಮನೆಗಳಿಗೆ ತೀವ್ರ ಹಾಗೂ 63 ಮನೆಗಳು ಭಾಗಶಃ ಹಾನಿಯಾಗಿದ್ದು, ₹ 58.96 ಲಕ್ಷ ಪರಿಹಾರ ನೀಡಲಾಗಿದೆ’ ಎಂದರು.
‘ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಪಿಡಿ ಖಾತೆಯಲ್ಲಿ ₹ 25.19 ಕೋಟಿ ಅನುದಾನ ಲಭ್ಯವಿದೆ. ತುಂಗಭದ್ರಾ ನದಿ ಪಾತ್ರದಲ್ಲಿರುವ ಹೊನ್ನಾಳಿಯ ಬಾಲ್ರಾಜ್ ಘಾಟ್ ಪ್ರದೇಶದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು’ ಎಂದು ಹೇಳಿದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿ, ರಾಮತೀರ್ಥ ಹಾಗೂ ಹೊಸಹಳ್ಳಿಯಲ್ಲಿ 45 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಈ ಬಗ್ಗೆ ವರದಿಯಾಗಿದ್ದು 2 ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.