
ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಫೆ.22ರಿಂದ 25ರವರೆಗೆ ನಡೆಯಲಿದ್ದು ಅಗತ್ಯ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಧಾರ್ಮಿಕ ಕೈಂಕರ್ಯ, ಉತ್ಸವಕ್ಕೆ ನಗರ ಸಜ್ಜುಗೊಳ್ಳುತ್ತಿದೆ. ಸ್ವಚ್ಛತೆ ಹಾಗೂ ಭಕ್ತರ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಇಲ್ಲಿನ ದುರ್ಗಾಂಬಿಕಾ ದೇವಿ ದೇಗುಲದ ಮುಂಭಾಗದ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿ ಸಲಹೆಗಳನ್ನು ಪಡೆಯಲಾಗಿದೆ. ದೇಗುಲದ ಸುತ್ತ ಪ್ರಾಣಿಬಲಿ ನಿಷೇಧಿಸಲಾಗಿದೆ. ದುರ್ಗಾಂಬಿಕಾ ದೇಗುಲದ ಸುತ್ತ ಉಪವಿಭಾಗಾಧಿಕಾರಿ, ಚೌಡೇಶ್ವರಿ ದೇಗುಲದ ಬಳಿ ತಹಶೀಲ್ದಾರ್ ಹಾಗೂ ಕಾಯಿಪೇಟೆ, ವಸಂತ ಚಿತ್ರಮಂದಿರದ ಸುತ್ತ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಜಿಲ್ಲಾ ಯೋಜನಾ ನಿರ್ದೇಶಕ ಮಹಾಂತೇಶ್ ಅವರನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ’ ಎಂದರು.
‘ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ನಗರದ ಪ್ರವೇಶದ್ವಾರ, ಪ್ರಮುಖ ರಸ್ತೆ, ವೃತ್ತಗಳು ದೀಪಾಲಂಕಾರದಲ್ಲಿ ಕಂಗೊಳಿಸಲಿವೆ. ಆಯಕಟ್ಟಿನ ಸ್ಥಳಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಅಲ್ಲಲ್ಲಿ ಎಲ್ಇಡಿ ಪರದೆಗಳನ್ನು ಹಾಕಲಾಗುತ್ತದೆ’ ಎಂದು ವಿವರಿಸಿದರು.
ಫ್ಲೆಕ್ಸ್, ಬಂಟಿಂಗ್ಸ್ ನಿಷೇಧ:
‘ಜಾತ್ರಾ ಮಹೋತ್ಸವದ ಅಂಗವಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್, ಬಂಟಿಂಗ್ಸ್ಗಳನ್ನು ಅಳವಡಿಸುವಂತಿಲ್ಲ. ಇಂತಹ ಅನಧಿಕೃತ ಫ್ಲೆಕ್ಸ್ಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ವಿದ್ಯುತ್ ಕಂಬ, ಮರ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಮಹಾನಗರ ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಫ್ಲೆಕ್ಸ್ ಅಳವಡಿಸಿಕೊಳ್ಳಲು ಅವಕಾಶವಿದೆ’ ಎಂದರು.
‘ದೇಗುಲದ ಸುತ್ತ ಹಲವು ವರ್ಷಗಳಿಂದ ಬಾಕಿ ಇದ್ದ ಒಳಚರಂಡಿಗಳನ್ನು ಶುಚಿಗೊಳಿಸಲಾಗಿದೆ. ಅಂದಾಜು 100 ಲೋಡ್ ತ್ಯಾಜ್ಯವನ್ನು ಹೊರ ಹಾಕಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಇರುವ ಮಹನೀಯರ ಪ್ರತಿಮೆ, ಪುತ್ಥಳಿಗಳನ್ನು ಶುಚಿಗೊಳಿಸಲಾಗುತ್ತಿದೆ. ಸುಣ್ಣ, ಬಣ್ಣ ಹಚ್ಚುವ ಕೆಲಸ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ದೇಗುಲದ ಸುತ್ತ ಜರಡಿ ಹಿಡಿದ ಮರಳು ಹಾಕಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಹಬ್ಬದ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಾರದು. ಅಗತ್ಯ ಸ್ಥಳಗಳಲ್ಲಿ ಜನರೇಟರ್ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಮಾಡಬೇಕು. ಭಕ್ತರ ಅನುಕೂಲಕ್ಕಾಗಿ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕುವ, ಹಂಚಿಕೊಳ್ಳುವ ಮುನ್ನ ಆಲೋಚಿಸಬೇಕು. ಪ್ರಾಣಿ ಬಲಿ ನಿಷೇಧವಿದ್ದು, ಹಳೆಯ ವಿಡಿಯೊ ಅಥವಾ ಕೃತಕ ಬುದ್ಧಿಮತ್ತೆಯ (ಎಐ) ಚಿತ್ರಗಳನ್ನು ಹಂಚಿಕೊಳ್ಳಬಾರದು’ ಎಂದು ಹೇಳಿದರು.
‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ್ ರಾವ್, ಜಿಲ್ಲಾ ಯೋಜನಾ ನಿರ್ದೇಶಕ ಮಹಾಂತೇಶ್, ಡಿವೈಎಸ್ಪಿ ಶರಣ ಬಸವೇಶ್ವರ, ದೇವಸ್ಥಾನ ಸಮಿತಿಯ ಮುಖಂಡರಾದ ಎಚ್.ಬಿ. ಗೋಣೆಪ್ಪ, ಸಾಳಂಕಿ ಉಮೇಶ್, ಹನುಮಂತರಾವ್ ಜಾಧವ್, ಶ್ರೀನಿವಾಸ ಪವಾರ್, ಗೌಡರ ಸುರೇಶ್, ಬಣಕಾರ್ ರಾಮಣ್ಣ, ಕರಿಬಸಪ್ಪ, ಕರಿಗಾರ ಬಸಪ್ಪ ಹಾಜರಿದ್ದರು.
ಮದ್ಯ ಮಾರಾಟ ನಿಷೇಧ ಸಾಧ್ಯತೆ ದುರ್ಗಾಂಬಿಕಾ ದೇಗುಲದ ಸುತ್ತ ಫೆ.22ರಿಂದ ಫೆ.25ರವರೆಗೆ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ ಜಿಲ್ಲಾಡಳಿತ ಆಲೋಚನೆ ಮಾಡುತ್ತಿದೆ. ‘ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸಿ’ ಎಂದು ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದೆ. ಮದ್ಯ ಮಾರಾಟ ನಿಷೇಧದ ಕುರಿತು ಇನ್ನಷ್ಟೇ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ. ದೇಗುಲದ ಸುತ್ತಲಿನ ಮದ್ಯದಂಗಡಿ ಮುಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಹೊರಠಾಣೆ ತೀವ್ರ ನಿಗಾ
ಎಸ್ಪಿ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದ ಸಮೀಪ ತಾತ್ಕಾಲಿಕವಾಗಿ ಹೊರಠಾಣೆಯನ್ನು ಸ್ಥಾಪಿಸಲಾಗುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಸರ್ಚ್ಲೈಟ್ ಮೂಲಕ ತೀವ್ರ ಇಗಾ ಇಡುವ ವ್ಯವಸ್ಥೆ ರೂಪಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ತಿಳಿಸಿದರು. ‘ಸರ ಕಳವು ಬ್ಯಾಗ್ ಮೊಬೈಲ್ ಕಳವು ಮಕ್ಕಳು ಕಾಣೆಯಾದರೆ ಹೊರಠಾಣೆಗೆ ಮಾಹಿತಿ ನೀಡಬಹುದು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ದೇವಿ ದರ್ಶನಕ್ಕೆ ಗಣ್ಯರು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ. ಕುಸ್ತಿ ನಡೆಯುವ ಸ್ಥಳಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುವುದು’ ಎಂದರು.
ದೇಗುಲಗಳಿಗೆ ಹೊಸರೂಪ
ಆಯುಕ್ತೆ ‘ದುರ್ಗಾಂಬಿಕಾ ದೇವಸ್ಥಾನದ ಸುತ್ತಲಿನ ದೇವಸ್ಥಾನಗಳಿಗೆ ₹ 51 ಲಕ್ಷ ವೆಚ್ಚದಲ್ಲಿ ಬಣ್ಣ ಬಳಿಯಲಾಗುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ಈ ದೇಗುಲಗಳು ಹೊಸರೂಪದಲ್ಲಿ ಕಂಗೊಳಿಸಲಿವೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು. ‘ದೇವಸ್ಥಾನದ ಬಳಿ 24 ಗಂಟೆ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. 30 ಸ್ವಚ್ಛತಾ ಸಿಬ್ಬಂದಿ ನಿಯೋಜಿಸಲಾಗಿದೆ. ಭಕ್ತರ ಉರುಳು ಸೇವೆಗೆ ಮರಳು ಸ್ನಾನಕ್ಕೆ 20 ನಳಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇವುಗಳಿಗೆ ₹ 11 ಲಕ್ಷ ವೆಚ್ಚವಾಗುತ್ತಿದೆ. ಸಂಗೊಳ್ಳಿ ರಾಯಣ್ಣ ವೃತ್ತ ಗುಂಡಿ ವೃತ್ತ ಬಿ.ಆರ್. ಅಂಬೇಡ್ಕರ್ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.