ದಾವಣಗೆರೆ: ಇಲ್ಲಿನ ಮೆಹಬೂಬ್ ನಗರದಲ್ಲಿ ಕುಸಿದ ಮನೆಯ ಅವಶೇಷಗಳಡಿಯಲ್ಲಿ ಸಿಲುಕಿದ್ದ ವೃದ್ಧ ದಂಪತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿದ್ದಾರೆ.
ಮೆಹಬೂಬ್ ನಗರದ ನಿವಾಸಿ ಬುಡೆನ್ ಸಾಬ್ (80) ಹಾಗೂ ಅವರ ಪತ್ನಿ ನೂರ್ ಜಹಾನ್ (73) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಮಣ್ಣಿನ ಗೋಡೆಗಳು ಶಿಥಿಲಗೊಂಡಿದ್ದವು. ಶುಕ್ರವಾರ ನಸುಕಿನಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ. ನಿದ್ದೆಯಲ್ಲಿದ್ದ ವೃದ್ದ ದಂಪತಿಯ ಮೇಲೆ ಮನೆಯ ಅವಶೇಷಗಳು ಬಿದ್ದಿದ್ದವು. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್, ಠಾಣಾಧಿಕಾರಿಗಳಾದ ಫಕೀರಪ್ಪ ಉಪ್ಪಾರ್, ಭೀಮರಾವ್, ಮೊಹಮ್ಮದ್ ರಫೀಕ್, ತಿಪ್ಪೇಸ್ವಾಮಿ, ಗಂಗಾ ನಾಯಕ್, ಅಶೋಕ್ ನಾಯಕ್, ಕಿರಣ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.