ADVERTISEMENT

ಶಿಕ್ಷಣಕ್ಕೆ ದಾವಣಗೆರೆ ಲಯನ್ಸ್ ಮಾದರಿ

ಲಯನ್ಸ್‌ ಕ್ಲಬ್‌ ಸುವರ್ಣ ಮಹೋತ್ಸವದಲ್ಲಿ ಜೆಡಿಎಸ್‌ ಮುಖಂಡ ವೈ.ಎಸ್‌.ವಿ ದತ್ತ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 17:27 IST
Last Updated 2 ಜೂನ್ 2019, 17:27 IST
ದಾವಣಗರೆಯ ಬಂಟರ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಕಲಾವಿದರು –ಪ್ರಜಾವಾಣಿ ಚಿತ್ರ
ದಾವಣಗರೆಯ ಬಂಟರ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಕಲಾವಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ದಾವಣಗೆರೆ ಲಯನ್ಸ್ ಕ್ಲಬ್‌ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ ಶ್ಲಾಘಿಸಿದರು.

ದಾವಣಗೆರೆಯ ಲಯನ್ಸ್‌ ಕ್ಲಬ್‌ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್‌. ನಾಗಪ್ರಕಾಶ್‌ ಅವರು ಪಿಯುಸಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ₹10 ಲಕ್ಷ ಕೊಡುಗೆ ನೀಡಿದ್ದು, ಶಿಲಾನ್ಯಾಸ ನೆರವೇರಿಸಲಾಗಿದೆ. ಆ ಮೂಲಕ ಶಿಕ್ಷಣವಂಚಿತರ ಮನೆ ಬಾಗಿಲಿಗೆ ಶಿಕ್ಷಣವನ್ನು ಕೊಂಡೊಯ್ಯುವ ಕೆಲಸವನ್ನು ಲಯನ್ಸ್‌ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

‘ಇಂದಿನ ವ್ಯವಸ್ಥೆ ತುಂಬಾ ಹದಗೆಟ್ಟಿದ್ದು, ಜನರಿಗೆ ಪ್ರಾಮಾಣಿಕ ಸೇವೆ ಸಿಗುತ್ತಿಲ್ಲ. ಜನಪರ ಆಲೋಚನೆ, ಜನಗಳಿಗೋಸ್ಕರ ಕಾರ್ಯಕ್ರಮಗಳನ್ನು ಯಾರು ರೂಪಿಸಬೇಕಿತ್ತೋ ಅವರು ಮಾಡುತ್ತಿಲ್ಲ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಸಿದರು. ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಯಾವುದೇ ಆಮಿಷ ದುರಾಸೆ ಇಲ್ಲದೇ ಪ್ರಾಮಾಣಿಕ ಹಾಗೂ ಬದ್ಧತೆಯಿಂದ ಲಯನ್ಸ್‌ ಸಂಸ್ಥೆ ಮಾಡುತ್ತಿದೆ’ ಎಂದರು.

‘ಲಯನ್ಸ್ ದೇಶ ವಿದೇಶಗಳಲ್ಲಿ ಕಾರ್ಯವೈಖರಿಯಲ್ಲಿ ಛಾಪು ಮೂಡಿಸಿದೆ. ಸೇವೆ, ಸಾಮಾಜಿಕ ಬದ್ಧತೆ, ಸಂಸ್ಕಾರಯುತ ಕಾರ್ಯಕ್ರಮಗಳನ್ನು ಯೋಜಿಸುತ್ತಿರುವ ಈ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಸೇವೆ ಮಾಡುತ್ತಿದೆ’ ಎಂದು ಹೇಳಿದರು.

ಲಯನ್ಸ್ ಕ್ಲಬ್‌ ಚೆನ್ನಾಗಿ ಜನಸೇವೆ ಮಾಡುತ್ತಿದೆ. ಏಕೆಂದರೆ ಇಲ್ಲಿ ಮುಖ್ಯಮಂತ್ರಿ ಇಲ್ಲ, ಶಾಸಕರೂ ಇಲ್ಲ. ಇಲ್ಲಿರುವುದು ಗವರ್ನರ್‌ಗಳು ಮಾತ್ರ. ಅದಕ್ಕಾಗಿಯೇ ಎಲ್ಲಾ ಕಾರ್ಯಗಳು ಬದ್ಧತೆಯಿಂದ ನಡೆಯುತ್ತಿವೆ ಎಂದು ಹೇಳಿದರು.

ಸುಗಮ ಸಂಗೀತ ಗಂಗಾದ ಅಧ್ಯಕ್ಷ ಜೆ.ಪಿ. ಕೃಷ್ಣೇಗೌಡ, ಡಿಸ್ಟ್ರಿಕ್ಟ್ 317 ಸಿಯ ಗವರ್ನರ್ ತಲ್ಲೂರು ಶಿವರಾಮ್‌ ಶೆಟ್ಟಿ, ದಾವಣಗೆರೆ ಲಯನ್ಸ್‌ ಟ್ರಸ್ಟ್ ಅಧ್ಯಕ್ಷ ಜಿ. ನಾಗನೂರ್‌, ದಾವಣಗೆರೆ ಲಯನ್ಸ್‌ ಕ್ಲಬ್ ಅಧ್ಯಕ್ಷ ಎ.ಬಿ. ಪ್ರತಾಪ್‌ ಇದ್ದರು.

ದಾವಣಗೆರೆ ಲಯನ್ಸ್‌ ಕ್ಲಬ್‌ಗೆ ಆಯ್ಕೆಯಾದ ವಿ.ಜಿ. ಶೆಟ್ಟಿ, ಎನ್‌.ಎಂ. ಹೆಗ್ಡೆ, ವಿಶ್ವನಾಥ್‌ ಶೆಟ್ಟಿ, ಅವರನ್ನು ಅಭಿನಂದಿಸಲಾಯಿತು.

ಹೇಮಾ ಶ್ರೀನಿವಾಸ್ ತಂಡದಿಂದ ನಡೆದ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.