ದಾವಣಗೆರೆ: ಸೆಮಿಸ್ಟರ್ ಪರೀಕ್ಷೆ ಮುಗಿದ ಬಳಿಕ ಸಿಕ್ಕ ರಜಾ ಅವಧಿಯ ಮೆಸ್ಬಿಲ್ ಪಾವತಿಸುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಹಾಸ್ಟೆಲ್ ನೀಡಿದ ಸೂಚನೆಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನ ಸೇವಿಸಿದ ಊಟಕ್ಕೆ ಮಾಸಿಕ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ.
ವಿದ್ಯಾರ್ಥಿನಿಲಯದ ಮೆಸ್ಬಿಲ್ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ನ ಆಹಾರ ಪೂರೈಕೆಯ ಗುತ್ತಿಗೆದಾರರ ನಡುವೆ ತಿಕ್ಕಾಟ ಶುರುವಾಗಿದೆ. ‘ರಜಾ ಅವಧಿಯ ಮೆಸ್ಬಿಲ್ ಪಾವತಿಸಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ನೀಡಿದ್ದಾರೆ. ‘ಮಾಸಿಕ ಶುಲ್ಕ ಪಾವತಿಸುವುದು ಕಡ್ಡಾಯ’ ಎಂಬುದಾಗಿ ಹಾಸ್ಟೆಲ್ನ ಆಹಾರದ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ 1 ಮತ್ತು 3ನೇ ಸೆಮಿಸ್ಟರ್ ಮಾರ್ಚ್ನಲ್ಲಿ ಮುಗಿದಿತ್ತು. ಏಪ್ರಿಲ್ ತಿಂಗಳಲ್ಲಿ 2 ಮತ್ತು 4ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಿದ್ದವು. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರು. ಕೆಲ ವಿಭಾಗದ ವಿದ್ಯಾರ್ಥಿಗಳಿಗೆ 1 ವಾರ ಮತ್ತು ಇನ್ನೂ ಕೆಲ ವಿಭಾಗದ ವಿದ್ಯಾರ್ಥಿಗಳಿಗೆ 2 ವಾರ ರಜೆ ಸಿಕ್ಕಿತ್ತು. ಈ ಅವಧಿಯ ಮೆಸ್ಬಿಲ್ ಪಾವತಿಗೆ ನೀಡಿದ ಸೂಚನೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
‘ಮಾರ್ಚ್ ಅಂತ್ಯಕ್ಕೆ ಪರೀಕ್ಷೆ ಮುಗಿದಿತ್ತು. ರಜಾ ಅವಧಿ ಮುಗಿಸಿ ಏಪ್ರಿಲ್ 21ಕ್ಕೆ ಹಾಸ್ಟೆಲ್ಗೆ ಬಂದಿದ್ದೇನೆ. ಏಪ್ರಿಲ್ ತಿಂಗಳಲ್ಲಿ 10 ದಿನ ಮಾತ್ರವೇ ಊಟ ಮಾಡಿದ್ದೇನೆ. ಇಡೀ ತಿಂಗಳ ಮೆಸ್ಬಿಲ್ ಪಾವತಿಸುವಂತೆ ಹೇಳಿದರೆ ಹೇಗೆ? ಆರ್ಥಿಕ ಸಂಕಷ್ಟದ ನಡುವೆಯೂ ಉನ್ನತ ಶಿಕ್ಷಣ ಪಡೆಯಲು ವಿಶ್ವವಿದ್ಯಾಲಯಕ್ಕೆ ಬಂದಿರುವ ಬಡ ವಿದ್ಯಾರ್ಥಿಗಳಿಗೆ ಇದು ಹೊರೆಯಾಗಿದೆ’ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.
ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ 6 ಹಾಸ್ಟೆಲ್ಗಳಿವೆ. 450 ವಿದ್ಯಾರ್ಥಿಗಳು ಹಾಗೂ 450 ವಿದ್ಯಾರ್ಥಿನಿಯರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ. ನಿತ್ಯ ₹ 75ರಂತೆ ಮಾಸಿಕ ₹ 2,325 ಮೆಸ್ಬಿಲ್ ನಿಗದಿಪಡಿಸಲಾಗಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಹಾಗೂ ಟೀ/ಕಾಫಿ ನೀಡಲಾಗುತ್ತಿದೆ. ಹಾಸ್ಟೆಲ್ಗೆ ಆಹಾರ ಪೂರೈಕೆಗೆ ವಿಶ್ವವಿದ್ಯಾಲಯ ಹೊರಗುತ್ತಿಗೆ ನೀಡಿದೆ. ವಿದ್ಯಾರ್ಥಿಯೊಬ್ಬರಿಗೆ ₹ 75 ರಲ್ಲಿ ಒಂದು ದಿನದ ಆಹಾರ ಪೂರೈಕೆ ಕಷ್ಟ ಎಂಬುದು ಗುತ್ತಿಗೆದಾರರ ವಾದ.
‘ನಾಲ್ಕು ದಿನಕ್ಕೂ ಮೇಲ್ಪಟ್ಟು ರಜೆ ಮೇಲೆ ತೆರಳಿದರೆ ಮಾಸಿಕ ಮೆಸ್ಬಿಲ್ ಪಾವತಿಸುವ ಅಗತ್ಯವಿಲ್ಲ ಎಂಬುದಾಗಿ ಪ್ರವೇಶಾತಿ ಸಂದರ್ಭದಲ್ಲಿ ಮಾಹಿತಿ ನೀಡಲಾಗಿತ್ತು. ಸೆಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಮುನ್ನ ಎಲ್ಲರೂ ರಜೆಯ ಬಗ್ಗೆ ಲಿಖಿತ ಮಾಹಿತಿ ನೀಡಿದ್ದೆವು. ಇದನ್ನು ಪರಿಗಣಿಸದ ಗುತ್ತಿಗೆದಾರರು, ಮಾಸಿಕ ಶುಲ್ಕ ಪಾವತಿಸುವುದು ಕಡ್ಡಾಯ ಎಂಬುದಾಗಿ ಹೇಳುತ್ತಿದ್ದಾರೆ. ವಾರ್ಡನ್ ಮಧ್ಯಪ್ರವೇಶಿಸಿದ ಬಳಿಕ ಮೆಸ್ಬಿಲ್ಗೆ 5 ದಿನ ಮಾತ್ರ ವಿನಾಯಿತಿ ನೀಡಿದ್ದಾರೆ’ ಎಂದು ವಿದ್ಯಾರ್ಥಿನಿ ತಿಳಿಸಿದರು.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸೆಮಿಸ್ಟರ್ನಲ್ಲಿ ಏಕರೂಪ ವ್ಯವಸ್ಥೆ ತರುವ ಉದ್ದೇಶದಿಂದ ಪಠ್ಯ ಪೂರ್ಣಗೊಳ್ಳುವುದಕ್ಕೂ ಮುನ್ನವೇ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷೆಗೆ ಮುಂದಾಗಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾದ ಬಳಿಕ ಒಂದು ವಾರ ಪರೀಕ್ಷೆ ಮುಂದೂಡಿತ್ತು. ವಿಶ್ವವಿದ್ಯಾಲಯದ ದಾಖಲೆಯ ಪ್ರಕಾರ 2 ಮತ್ತು 4ನೇ ಸೆಮಿಸ್ಟರ್ ಮಾರ್ಚ್ 29ಕ್ಕೆ ಆರಂಭವಾಗಿದೆ. ಆದರೆ, ಈ ಸಮಯಕ್ಕೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪ್ರಯೋಗಾಲಯ ಪರೀಕ್ಷೆಗಳೇ ಪೂರ್ಣಗೊಂಡಿರಲಿಲ್ಲ. ಹೀಗಾಗಿ, ಏಪ್ರಿಲ್ನಲ್ಲಿ ಕೂಡ ತರಗತಿಗಳು ಸಮಯಕ್ಕೆ ಸರಿಯಾಗಿ ಆರಂಭವಾಗಿಲ್ಲ.
‘ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಹಾಸ್ಟೆಲ್ ಮೆಸ್ ಶುರುವಾಗಿದೆ. ಆದರೆ, ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಏಕಕಾಲಕ್ಕೆ ಕಾರ್ಯಾರಂಭವಾಗಲಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿದೆ. ಮಾಸಿಕ ಶುಲ್ಕ ಪಾವತಿಸುವುದು ಕಷ್ಟ ಎಂಬುದಾಗಿ ಕೆಲ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ನಾವು ಅಸಹಾಯಕರಾಗಿದ್ದೇವೆ’ ಎಂದು ವಾರ್ಡನ್ವೊಬ್ಬರು ತಿಳಿಸಿದರು.
ಒಂದು ವಾರಕ್ಕಿಂತ ಹೆಚ್ಚು ದಿನ ಹಾಸ್ಟೆಲ್ಗೆ ಗೈರಾದ ವಿದ್ಯಾರ್ಥಿಗೆ ಮಾಸಿಕ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. ಈ ವಿಚಾರವನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಪರವಾಗಿ ಕ್ರಮ ಕೈಗೊಳ್ಳಲಾಗುವುದುಪ್ರೊ.ಬಿ.ಡಿ.ಕುಂಬಾರ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.