ಮಲೇಬೆನ್ನೂರು: ಸಮೀಪದ ಕಾಮಲಾಪುರ ಗ್ರಾಮದ ಹೊರವಲಯದ ದೇವರಬೆಳಕೆರೆ ವ್ಯಾಪ್ತಿಯಲ್ಲಿ ನಾಟಿ ಮಾಡಿರುವ ಭತ್ತದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.
ಈ ಬಾರಿ ಮಳೆಯಿಂದ ದೇವರಬೆಳಕೆರೆ ಪಿಕಪ್ ಜಲಾಶಯ ಭರ್ತಿಯಾಗಿದ್ದರೂ ನಾಲೆಯಲ್ಲಿ ಹೂಳು ತುಂಬಿರುವ ಕಾರಣ ಭತ್ತದ ಗದ್ದೆಗಳಿಗೆ ನೀರು ಹರಿದು ಬರುತ್ತಿಲ್ಲ.
ಕಳೆದ ತಿಂಗಳು ಮಳೆ ಇದ್ದ ಕಾರಣ ನೀರಿನ ಸಮಸ್ಯೆ ಇರಲಿಲ್ಲ. ಈಗ ನೀರಿನ ಅಗತ್ಯ ಎದುರಾಗಿದೆ. ನಾಲೆಯ ಕೆಲವು ಭಾಗದ ಹೂಳು ಎತ್ತಿಸಿದ್ದರೂ ಮಳೆಗಾಲದಲ್ಲಿ ಕೆಸರು ಮಣ್ಣು, ಹೂಳು ತುಂಬಿದೆ. ನಾಲೆಯಲ್ಲಿ ಗಿಡಗಳು ಬೆಳೆದಿವೆ.ಸಾಕಷ್ಟು ಖರ್ಚು ಮಾಡಿ ಭತ್ತ ಬೆಳೆಯಲಾಗಿದೆ. ಒಂದೆರಡು ದಿನದಲ್ಲಿ ನೀರು ಬರದಿದ್ದರೆ ಬೆಳೆ ಒಣಗಿಹೋಗುತ್ತದೆ ಎಂದು ಕೊಟ್ರೇಶ್, ಬಸವರಾಜಪ್ಪ ಅಳಲು ತೋಡಿಕೊಂಡರು.
ಹರಿಹರ–ಶಿವಮೊಗ್ಗ ರಸ್ತೆ ಕೆಳಭಾಗದಲ್ಲಿ ನಾಲೆಯಲ್ಲಿ ನೀರು ಹರಿದು ಬರುತ್ತಿಲ್ಲ. ಮೇಲ್ಭಾಗದಲ್ಲಿ ನೀರು ಹಳ್ಳಕ್ಕೆ ಸೇರುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭುಗೌಡ ಮಾಹಿತಿ ನೀಡಿದರು.
ನೀರಾವರಿ ನಿಗಮದ ಅಧಿಕಾರಿಗಳು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.