ADVERTISEMENT

ದಶಕಗಳ ನೀರಾವರಿ ಕನಸು ಸಾಕಾರ

ಶಾಸಕ ಎಸ್.ವಿ. ರಾಮಚಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 6:16 IST
Last Updated 1 ಜನವರಿ 2023, 6:16 IST
ಜಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿಯನ್ನು ಶಾಸಕ ಎಸ್.ವಿ. ರಾಮಚಂದ್ರ ಉದ್ಘಾಟಿಸಿದರು.
ಜಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿಯನ್ನು ಶಾಸಕ ಎಸ್.ವಿ. ರಾಮಚಂದ್ರ ಉದ್ಘಾಟಿಸಿದರು.   

ಜಗಳೂರು: ‘ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 57 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಮತದಾರರಿಗೆ ಕೊಟ್ಟದ್ದ ಭರವಸೆ ಈಡೇರಿಸಿದ ತೃಪ್ತಿ ಇದೆ’ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ₹ 3500 ಕೋಟಿ ಅನುದಾನ ಮಂಜೂರಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಮಹತ್ವದ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. 57 ಕೆರೆ ತುಂಬಿಸುವ ಯೋಜನೆಯಡಿ 15 ದಿನಗಳಲ್ಲಿ 40 ಕೆರೆಗಳು ಭರ್ತಿಯಾಗಲಿವೆ. ₹ 1,450 ಕೋಟಿ ಅನುದಾನದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಶೀಘ್ರ ಮುಖ್ಯಮಂತ್ರಿ ಚಾಲನೆ ನೀಡುವರು ಎಂದರು.

ADVERTISEMENT

258ಕ್ಕೂ ಅಧಿಕ ಪ್ರತಿ ಬೂತ್‌ಗಳಲ್ಲಿ 10 ಜನರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಜನವರಿ 2ರಿಂದ 12ರವರೆಗೆ ನಡೆಯುವ ಬೂತ್ ವಿಜಯ ಅಭಿಯಾನದ ಯಶಸ್ಸಿಗೆ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್ ಸಲಹೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲಕುಮಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಮುಖಂಡರಾದ ಬಾತಿ ಚಂದ್ರಶೇಖರ್, ಮರೇನಹಳ್ಳಿ ಬಸವರಾಜ್, ಗಡಿಮಾಕುಂಟೆ ಸಿದ್ದೇಶ್, ಶಿವಕುಮಾರ ಸ್ವಾಮಿ, ಮಂಜುನಾಥಯ್ಯ, ಕೃಷ್ಣಮೂರ್ತಿ, ಮಂಜಮ್ಮ, ಲಲಿತಮ್ಮ, ಪಾಪಲಿಂಗಪ್ಪ, ನವೀನ್, ತಿಪ್ಪೇಸ್ವಾಮಿ, ಬಿಸ್ತುವಳ್ಳಿ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.