ನ್ಯಾಮತಿ: ತಾಲ್ಲೂಕಿನ ಭಾಯಗಡದಲ್ಲಿ ಸಂತ ಸೇವಾಲಾಲರ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ ಪಂದ್ಯಕ್ಕೆ ಚಾಲನೆ ನೀಡಲು ರೈಡರ್ ಆಗಿ ಮೈದಾನಕ್ಕೆ ಇಳಿದಿದ್ದ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಆಯತಪ್ಪಿ ಬಿದ್ದಿದ್ದಾರೆ.
ಮುಗ್ಗರಿಸಿ ಬಿದ್ದ ಅವರನ್ನು ಆಟಗಾರರು ತಕ್ಷಣ ಮೇಲೆತ್ತಿದ್ದಾರೆ. ಕೊಂಚ ಹೊತ್ತು ಸುಧಾರಿಸಿಕೊಂಡು ಮೈದಾನದಿಂದ ಹೊರನಡೆದಿದ್ದಾರೆ. ಅವರು ಆಯತಪ್ಪಿ ಬಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂತ ಸೇವಾಲಾಲ್ ಜಯಂತ್ಯುತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರೂ ಆಗಿರುವ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಬಡ್ಡಿ ರೇಡಿಂಗ್ಗೆ ಮೈದಾನಕ್ಕೆ ಇಳಿದಿದ್ದರು. ಕ್ರೀಡಾಸ್ಫೂರ್ತಿಯಲ್ಲಿ ಆಟವಾಡುತ್ತಿದ್ದ ಅವರು ಆಯತಪ್ಪಿ ಬಿದ್ದಿದ್ದರು.
‘ಉಪಸಭಾಧ್ಯಕ್ಷರು ಆರೋಗ್ಯವಾಗಿದ್ದಾರೆ. ಶನಿವಾರ ನಡೆದ ಭೋಗ್ ಕಾರ್ಯಕ್ರಮದಲ್ಲಿ ಕೂಡ ಪಾಲ್ಗೊಂಡಿದ್ದರು. ಮಧ್ಯಾಹ್ನದ ಬಳಿಕ ಭಾಯಗಡದಿಂದ ತೆರಳಿದರು’ ಎಂದು ಮಠದ ಮೂಲಗಳು ಮಾಹಿತಿ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.