ADVERTISEMENT

ಭಕ್ತಿ, ವೀರತ್ವ ಇದ್ದರೆ ಸಮಾಜದ ಅಭಿವೃದ್ಧಿ: ರವಿಶಂಕರ ಗುರೂಜಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 13:39 IST
Last Updated 14 ಜನವರಿ 2020, 13:39 IST
ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ಶ್ರೀ ಶ್ರೀ ರವಿಶಂಕರ್‌ ಗುರೂಜಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಬಗ್ಗೆ ವಚನಾನಂದ ಸ್ವಾಮೀಜಿ ವಿವರ ನೀಡಿದರು
ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ಶ್ರೀ ಶ್ರೀ ರವಿಶಂಕರ್‌ ಗುರೂಜಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಬಗ್ಗೆ ವಚನಾನಂದ ಸ್ವಾಮೀಜಿ ವಿವರ ನೀಡಿದರು   

ಹರಿಹರ: ಭಕ್ತಿಗೆ ಹೆಸರಾದ ಅಕ್ಕಮಹಾದೇವಿ, ಶೌರ್ಯಕ್ಕೆ ಹೆಸರಾದ ಕಿತ್ತೂರು ರಾಣಿ ಚನ್ನಮ್ಮ ಪಂಚಮಸಾಲಿ ಸಮಾಜದ ಕೊಡುಗೆ. ಭಕ್ತಿ ಮತ್ತು ಶೂರತ್ವ ಇರುವ ಯಾವುದೇ ಸಮಾಜ ಕಂಗೊಳಿಸುತ್ತದೆ ಎಂದು ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದರು.

ಹರಿಹರದಲ್ಲಿ ಮಂಗಳವಾರ ನಡೆದ ಹರಜಾತ್ರಾ ಮಹೋತ್ಸವ ಮತ್ತು ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಯುವ ಸನ್ಯಾಸಿಗಳ ಅವಶ್ಯಕತೆ ಇದೆ ಎಂದು ಹಿಂದೆಯೇ ಹೇಳಿದ್ದೆ. ಅಂಥ ಯುವ ಸನ್ಯಾಸಿಯಾಗಿರುವ ವಚನಾನಂದ ಸ್ವಾಮೀಜಿ 21 ತಿಂಗಳಲ್ಲಿ ಈ ಬಂಜರು ಭೂಮಿಯಲ್ಲಿ ಸ್ವರ್ಗವನ್ನೇ ಸೃಷ್ಟಿಸಿದ್ದಾರೆ. ಯೋಗ, ಭಕ್ತಿಯ ಜತೆಗೆ ಸಂಯೋಜನೆ ಮಾಡುವ ಕಲೆಯೂ ಅವರಲ್ಲಿದೆ. ಸಮಾಜವನ್ನು ಸಂಯೋಜನೆ ಮಾಡಿ ಮುಂದಕ್ಕೆ ಒಯ್ಯುತ್ತಿದ್ದಾರೆ. ಅದು ಕರ್ನಾಟಕದ ಹೆಮ್ಮೆ, ಹಿಂದೂ ಧರ್ಮದ ಸೌಭಾಗ್ಯ’ ಎಂದು ಶ್ಲಾಘಿಸಿದರು.

ADVERTISEMENT

ಎಲ್ಲೆಡೆ ಗಾಳಿ ಇದ್ದರೂ ಫ್ಯಾನ್‌ ಹತ್ತಿರ ಕೂತರಷ್ಟೇ ಗಾಳಿಯ ತಣ್ಣಗಿರನ ಅನುಭವ ಆಗುತ್ತದೆ. ಹಾಗೆಯೇ ದೇವರು ಎಲ್ಲ ಕಡೆ ಇದ್ದರೂ ಮಠದ ಹತ್ತಿರ, ಸ್ವಾಮೀಜಿಗಳ ಹತ್ತಿರ ಹೋದರಷ್ಟೇ ದೇವರ ಕಂಪು, ಇಂಪು ತಟ್ಟಲು ಸಾಧ್ಯ. ಭಗವಂತನಲ್ಲಿ ಭಕ್ತಿ ಇದ್ದರೆ ಬದುಕಿನಲ್ಲಿ ಉತ್ಸಾಹ ಇರುತ್ತದೆ.

‘ಋಷಿ, ಕೃಷಿ ದೇಶ ನಮ್ಮದು. ನಮ್ಮ ನಾಡು ನುಡಿ, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರೆ ಋಷಿ ಮತ್ತು ಕೃಷಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ವ್ಯವಸಾಯ ಬಿಟ್ಟರೆ ನಮ್ಮ ಆತ್ಮಕ್ಕೂ ಹರನಿಗೂ ತೃಪ್ತಿ ಇರುವುದಿಲ್ಲ. ಹಾಗಾಗಿ ರೈತರು ಸಂತೋಷದಿಂದ ಇರುವ ವಾತಾವರಣ ನಿರ್ಮಾಣಗೊಳ್ಳಬೇಕು. ಯುವಕರು ಸಂಭ್ರಮದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.