ದಾವಣಗೆರೆ: ಇಲ್ಲಿನ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ‘ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ’ (ಧೂಡಾ) ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದೆ. ಪ್ರಾಧಿಕಾರದಲ್ಲಿ ಲಭ್ಯವಿರುವ ₹ 120 ಕೋಟಿ ಅನುದಾನದಲ್ಲಿ ಉದ್ದೇಶಿತ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಆಡಳಿತಾತ್ಮಕ ಅನುಮೋದನೆ ಮಾತ್ರ ಬಾಕಿ ಇದೆ.
ಹೊಸ ಬಡಾವಣೆ ಅಭಿವೃದ್ಧಿಪಡಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ‘ಧೂಡಾ’ ನಿರ್ಧರಿಸಿದೆ. 250 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೊಂಡಿರುವ ಜೆ.ಎಚ್.ಪಟೇಲ್ ಬಡಾವಣೆಯ ಪ್ರಾಧಿಕಾರದ ನಿವೇಶನಗಳಲ್ಲಿ 4 ಅಪಾರ್ಟ್ಮೆಂಟ್ ನಿರ್ಮಿಸಲು ಮುಂದಾಗಿದೆ. ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ (ಕೆ–ರೇರಾ) ಅನುಮೋದನೆ ನೀಡಿದ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
‘ಅಪಾರ್ಟ್ಮೆಂಟ್ ನಿರ್ಮಾಣಕ್ಕಾಗಿ ಪ್ರಾಧಿಕಾರದ ಸ್ವಾಧೀನದಲ್ಲಿರುವ 2 ಅಥವಾ 3 ದೊಡ್ಡ ನಿವೇಶನಗಳನ್ನು ಜೋಡಿಸಿ ಬಳಸಿಕೊಳ್ಳಲಾಗುತ್ತಿದೆ. 100X120 ಅಳತೆಯ ನಿವೇಶನದಲ್ಲಿ (12,000 ಚದರ ಅಡಿ) 4 ಅಪಾರ್ಟ್ಮೆಂಟ್ಗಳು ಅಸ್ತಿತ್ವಕ್ಕೆ ಬರಲಿವೆ. ಪ್ರತಿ ಅಪಾರ್ಟ್ಮೆಂಟ್ಗೆ ₹ 5 ಕೋಟಿ ವೆಚ್ಚವಾಗುವ ಅಂದಾಜು ಇದೆ’ ಎಂದು ‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ ತಿಳಿಸಿದ್ದಾರೆ.
‘2 ಬೆಡ್ ರೂಂ, ಅಡುಗೆ ಕೋಣೆ ಹಾಗೂ ಹಾಲ್ ಮತ್ತು 3 ಬೆಡ್ ರೂಂ, ಅಡುಗೆ ಕೋಣೆ ಹಾಗೂ ಹಾಲ್ ಇರುವ ಎರಡು ವಿಧದ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಕಟ್ಟಡದಲ್ಲಿ 20ರಿಂದ 25 ಮನೆಗಳು ಇರಲಿವೆ. 4 ಕಟ್ಟಡದಿಂದ 100 ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಉದ್ದೇಶಿತ ಯೋಜನೆಗೆ ಪ್ರಾಧಿಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ’ ಎಂದು ಮಾಹಿತಿ ನೀಡಿದರು.
ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡುತ್ತಿದ್ದ ‘ಧೂಡಾ’ ಇದೇ ಮೊದಲ ಬಾರಿಗೆ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಕೈಹಾಕಿದೆ. ಅಪಾರ್ಟ್ಮೆಂಟ್ಗಳಲ್ಲಿನ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಎರಡು ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಿಕೊಳ್ಳಲಾಗಿದೆ.
‘ಅಪಾರ್ಟ್ಮೆಂಟ್ನಲ್ಲಿರುವ ಮನೆಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಮಾರ್ಗಸೂಚಿಯನ್ನು ನಿರೀಕ್ಷಿಸಲಾಗುತ್ತಿದೆ. ನಿವೇಶನ ಹಂಚಿಕೆಯಲ್ಲಿ ಅನುಸರಿಸುವ ಮೀಸಲಾತಿ, ರೋಸ್ಟರ್ ಪ್ರಕ್ರಿಯೆಯನ್ನೇ ಇಲ್ಲಿಯೂ ಪಾಲನೆ ಮಾಡಲಾಗುತ್ತದೆ’ ಎಂದು ತಿಮ್ಮಣ್ಣ ಮಾಹಿತಿ ನೀಡಿದರು.
ಶಾಪಿಂಗ್ ಮಾಲ್ ಇರಲಿದೆ
ಉದ್ದೇಶಿದ ಅಪಾರ್ಟ್ಮೆಂಟ್ ಕಟ್ಟಡದ ಮಹಡಿಯೊಂದನ್ನು ಶಾಪಿಂಗ್ ಮಾಲ್ಗೆ ಮೀಸಲಿಡುವ ಯೋಜನೆಯನ್ನೂ ‘ಧೂಡಾ’ ರೂಪಿಸಿದೆ. ಪಾರ್ಕಿಂಗ್ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಜನರು ಅಗತ್ಯ ವಸ್ತುಗಳಿಗೆ ಜೆ.ಎಚ್.ಪಟೇಲ್ ಬಡಾವಣೆಯಿಂದ ನಗರಕ್ಕೆ ಬರುವ ಅಗತ್ಯ ಇರುವುದಿಲ್ಲ.
ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಸರ್ಕಾರದ ಅನುದಾನಕ್ಕೆ ಕಾಯುವ ಅಗತ್ಯವಿಲ್ಲ. ಪ್ರಾಧಿಕಾರದಲ್ಲಿ ಲಭ್ಯವಿರುವ ಅನುದಾನದಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ.–ಹುಲ್ಮನಿ ತಿಮ್ಮಣ್ಣ, ಆಯುಕ್ತ ‘ಧೂಡಾ‘
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.